ನವದೆಹಲಿ : ಸಬರಮತಿ ಆಶ್ರಮದ ಪುನಾರಾಭಿವೃದ್ದಿಗೆ ನಿರ್ಧರಿಸಿರುವ ಗುಜರಾತ್ ರಾಜ್ಯ ಸರ್ಕಾರ ನಿರ್ಧಾರದ ವಿರುದ್ಧ ಮಹಾತ್ಮಗಾಂಧಿ ಮರಿ ಮೊಮ್ಮಗ ತುಷಾರ್ ಅರುಣ್ ಗಾಂಧಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆಶ್ರಮದ ಪುನರಾಭಿವೃದ್ದಿಗೆ ಅನುಮತಿ ನೀಡದಂತೆ ಅವರು ಮನವಿ ಮಾಡಿದ್ದಾರೆ.
ಅರ್ಜಿ ಸಲ್ಲಿಕೆ ಬಳಿಕ ಇಂದು ಅವರ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಿದರು. ಮತ್ತು ತುರ್ತು ವರ್ಚುವಲ್ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಈ ಮನವಿ ಆಲಿಸಿದ ಪೀಠ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.
ಸಬರಮತಿ ಆಶ್ರಮ ಒಂದು ಎಕರೆ ವಿಸ್ತೀರ್ಣದಲ್ಲಿದೆ. ಈ ಒಂದು ಎಕರೆ ಸುತ್ತಲಿನ 55 ಎಕರೆ ಭೂಮಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಗುಜರಾತ್ ಸರ್ಕಾರ ಹೊಂದಿದೆ. ಗಾಂಧಿ ಸ್ಪೂರ್ತಿಯ ಭೂಮಿ ಇದಾಗಿದ್ದು ಇದನ್ನು ಅಭಿವೃದ್ಧಿಪಡಿಸುವ ಮೂಲಕ ಗಾಂಧಿ ಬದುಕು, ತತ್ವಗಳು ಮತ್ತು ಜೀವನದ ಧೈಯವನ್ನು ಹರಡುವ ಯೋಜನೆ ಇದಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಗಾಂಧಿ ಮೊಮ್ಮಗ ತುಷಾರ್ ಅರುಣ್ ಗಾಂಧಿ, ಅಭಿವೃದ್ಧಿಯ ಹೆಸರಿನಲ್ಲಿ ಸಬರಮತಿ ಆಶ್ರಮ ಭೌತಿಕ ರಚನೆಯನ್ನು ಬದಲಾಯಿಸಬಹುದು, ಗಾಂಧಿ ಸರಳ ತತ್ವದಂತೆ ಆಶ್ರಮವೂ ಸರಳವಾಗಿದೆ. ಟ್ರಸ್ಟ್ ಅದನ್ನು ಸಂರಕ್ಷಿಸಿ ಉಳಸಿಕೊಂಡು ಬಂದಿದೆ. ಸರ್ಕಾರಕ್ಕೆ ಪುನರಾಭಿವೃದ್ಧಿಗೆ ಅವಕಾಶ ನೀಡಿದರೆ ಮೂಲ ಪರಿಕಲ್ಪನೆಗೆ ದಕ್ಕೆಯಾಗಲಿದೆ. ಇದನ್ನೂ ಓದಿ: ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ
ಪ್ರವಾಸಿಗರನ್ನು ಆಕರ್ಷಿಸಲು ವಾಣಿಜ್ಯ ಚಟುವಟಿಕೆಗಳು ಶುರುವಾಗಲಿದೆ. ನಂತರ ಸರ್ಕಾರ ಲಾಭದ ಉದ್ದೇಶಕ್ಕಾಗಿ ಖಾಸಗಿ ವ್ಯಕ್ತಿಗಳಿಗೆ ನಿರ್ವಹಣೆಗೆ ಗುತ್ತಿಗೆ ನೀಡಬಹುದು. ಗುತ್ತಿಗದಾರನಿಗೆ ಗಾಂಧಿಗಿಂತ ವ್ಯಾಪಾರ ಮುಖ್ಯವಾಗಲಿದ್ದು ಇದು ಸಬರಮತಿ ಆಶ್ರಮ ಮೂಲ ಕಲ್ಪನೆಗೆ ಧಕ್ಕೆ ತರಲಿದೆ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.