ಕಲಬುರಗಿ: ನಗರದ ಐತಿಹಾಸಿಕ ಕೋಟೆಯಲ್ಲಿರುವ ಸ್ವಯಂಭೋ ಸೋಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಪೂಜೆ ಸಲ್ಲಿಸಲು ಬಂದಿದ್ದ ನೂರಾರು ಹಿಂದೂ ಕಾರ್ಯಕರ್ತರನ್ನು ಬಂಧಿಸಿದ ಘಟನೆ ನಡೆದಿದೆ.
ದೇಶಾದ್ಯಂತ ಶಿವರಾತ್ರಿಯ ಮಹಾಪರ್ವದ ಹಿನ್ನೆಲೆಯಲ್ಲಿ ಕೋಟೆಯೊಳಗಿನ ಸ್ವಯಂಭೋ ಸೋಮೇಶ್ವರ ದೇವಸ್ಥಾನದಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ನಿರ್ಧರಿಸಿದ್ದರು. ಆದರೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸ್ ಇಲಾಖೆ, ಭಾನುವಾರ (ಫೆ.15) ಬೆಳಿಗ್ಗೆ ಕೋಟೆಯ ಸುತ್ತಮುತ್ತ ನೂರಾರು ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್ ಹಾಕಿ ಕೋಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ, ಕೋಟೆಯೊಳಗೆ ಯಾರನ್ನೂ ಬಿಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ದೇಶದ ಪಡಿತರ ವ್ಯವಸ್ಥೆಗೆ ಡಿಜಿಟಲ್ ಕರೆನ್ಸಿಯ ಸ್ಪರ್ಶ – ಪಾರದರ್ಶಕತೆಯತ್ತ ಕೇಂದ್ರದಿಂದ ಮತ್ತೊಂದು ದಿಟ್ಟ ಹೆಜ್ಜೆ
ಶಿವರಾತ್ರಿಯ ದಿನ ಬೆಳಿಗ್ಗೆ ನಗರದ ಬಸ್ ನಿಲ್ದಾಣದ ಬಳಿ ಜಮಾವಣೆಯಾಗಿ ಕೋಟೆಯವರೆಗೂ ಪಾದಯಾತ್ರೆ ಮೂಲಕ ಹರ್ ಹರ್ ಮಹಾದೇವ, ಓಂ ನಮಃ ಶಿವಾಯ ಹಾಗೂ ಬಜರಂಗದಳದ ಪರ ಘೋಷಣೆ ಕೂಗುತ್ತ ಕೋಟೆಯತ್ತ ಆಗಮಿಸಿದ ಕಾರ್ಯಕರ್ತರನ್ನೂ ಪೊಲೀಸರು ಪೂಜೆಗೆ ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ನಡುರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಇದು ಕೆಲ ಕಾಲ ಸಂಚಾರ ವ್ಯತ್ಯಯಕ್ಕೂ ಕಾರಣವಾಯಿತು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಪೊಲೀಸರು ಪ್ರತಿಭಟನಾ ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇವರನ್ನು ಪೊಲೀಸರು ಬಸ್ ಮೂಲಕ ಕಲಬುರಗಿ ಹೊರವಲಯದ ಪರತಹಬಾದ್ ಪೊಲೀಸ್ ಠಾಣೆಗೆ ಕರೆದೊಯ್ದು, ಬಳಿಕ ಬಿಡುಗಡೆಗೊಳಿಸಿದರು.
ಈ ಹೋರಾಟದಲ್ಲಿ ಪ್ರಮುಖರಾದ ದಿವ್ಯಾ ಹಾಗರಗಿ, ಸಾಗರ್ ರಾಠೋಡ್, ಶಶಿಕುಮಾರ್ ಶೆಟ್ಟಿ, ಪ್ರಶಾಂತ್ ಜಾಧವ, ಪವನ್ ಪೂಜಾರಿ, ಅಣ್ಣರಾವ್ ಪಾಟೀಲ್, ಭಾರತ್ ಮಡಿವಾಳ, ಅಭಿಷೇಕ್ ಕನಸುರೆ, ದಿಲೀಪ್ ಕನಸುರೆ, ನಾಗರಾಜ್ ಕಾನೂರ್, ನಿತೀನ್ ಠಾಕೂರ್, ನಾಗರಾಜ್ ವೀರನಾಯಕ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಬಂದೋಬಸ್ತಗಾಗಿ ದಕ್ಷಿಣ ಎಸಿಪಿ ಎಸ್.ಎಸ್.ಸುಬೇದಾರ್, ಚೌಕ್ ಪೊಲೀಸ್ ಠಾಣೆ ಪೆ ಸುಶೀಲ್ ಕುಮಾರ್, ಎಸಿಪಿ ಶಿವನಗೌಡ ಪಾಟೀಲ್, ಮಹಿಳಾ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಕ್ಕಮಹಾದೇವಿ, ರೋಜಾ ಪೊಲೀಸ್ ಠಾಣೆ ಪಿಐ ದಿಲೀಪ್ ಸಾಗರ್ ಸೇರಿದಂತೆ ಇತರೆ ಅಧಿಕಾರಿಗಳು ಸಿಬ್ಬಂದಿಗಳು ಪೊಲೀಸ್ ಬಂದೋಬಸ್ತ್ ನಿಯೋಜನೆಗಾಗಿ ಉಪಸ್ಥಿತರಿದ್ದರು. ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿ – ಬೈಕ್ ಸವಾರ ಸಾವು

