ಮುಂಬೈ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಬಂಡಾಯ ನಾಯಕ ಏಕನಾಥ ಶಿಂಧೆ ಅವರನ್ನು ಸೇರಿದ್ದಾರೆ ಎನ್ನಲಾಗಿದ್ದ ಶಿವಸೇನೆ ಶಾಸಕ ನಿತಿನ್ ದೇಶ್ಮುಖ್ ಮತ್ತೆ ಉದ್ಧವ್ ಠಾಕ್ರೆ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಅಪಹರಿಸಿ ಗುಜರಾತ್ನ ಸೂರತ್ಗೆ ಕರೆದೊಯ್ದಿದ್ದರು. ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಯಾವಾಗಲೂ ನನ್ನ ಬೆಂಬಲ ಉದ್ಧವ್ ಠಾಕ್ರೆ ಅವರಿಗಿದೆ ಎಂದು ನಿತಿನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ನಿನ್ನ ಅಹಂಕಾರ ನಾಲ್ಕೇ ದಿನ – ಸಂಜಯ್ ರಾವತ್ ಮನೆ ಎದುರು ಬ್ಯಾನರ್
ನಾನು ತಪ್ಪಿಸಿಕೊಂಡು ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಿಂತಿದ್ದಾಗ ನೂರಕ್ಕೂ ಹೆಚ್ಚು ಪೊಲೀಸರು ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಅವರು ನನಗೆ ಹೃದಯಾಘಾತವಾಗಿದೆ ಎಂದು ನಟಿಸಿದರು. ನನಗೆ ಆರೋಗ್ಯ ತೊಂದರೆ ಇಲ್ಲದಿದ್ದರೂ ಬಲವಂತವಾಗಿ ನನಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ ಎಂದು ನಿತಿನ್ ಗಂಭೀರ ಆರೋಪ ಮಾಡಿದ್ದಾರೆ.
ನನಗೆ ಆಸ್ಪತ್ರೆಯಲ್ಲಿ ಬಲವಂತವಾಗಿ ಕೆಲವು ಇಂಜೆಕ್ಷನ್ಗಳನ್ನು ನೀಡಲಾಯಿತು. ನನ್ನ ರಕ್ತದೊತ್ತಡ ಹೆಚ್ಚಾಗಿರಲಿಲ್ಲ. ನನಗೆ ಬಲವಂತವಾಗಿ ಕೆಲವು ಚುಚ್ಚುಮದ್ದು ನೀಡಲಾಯಿತು ಎಂದು ದೂರಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ರಾಜ್ಯಪಾಲ, ಸಿಎಂಗೆ ಕೊರೊನಾ
ನಿತಿನ್ ದೇಶ್ಮುಖ್ ಪತ್ನಿ ಪ್ರಾಂಜಲಿ ಅವರು ನನ್ನ ಪತಿ ಕಾಣೆಯಾಗಿದ್ದಾರೆ ಎಂದು ಅಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೂನ್ 20 ರಂದು ಸಂಜೆ 7 ಗಂಟೆಗೆ ತನ್ನ ಪತಿಯೊಂದಿಗೆ ಫೋನ್ ಕರೆಯಲ್ಲಿ ಕೊನೆಯದಾಗಿ ಮಾತನಾಡಿದ್ದೇನೆ. ಅವರ ಫೋನ್ ಸ್ವಿಚ್ ಆಗಿರುವುದರಿಂದ ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.