ಬೆಳಗಾವಿಗೆ: ಮಹಾರಾಷ್ಟ್ರ (Maharashtra) ಮತ್ತು ಬೆಳಗಾವಿ (Belagavi) ಗಡಿ ವಿವಾದದ ನಡುವೆಯೂ ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ಮಹಾರಾಷ್ಟ್ರದ ಎನ್ಸಿಪಿ (NCP) ಶಾಸಕ ರೋಹಿತ್ ಪವಾರ್ (Rohit Pawar) ಬೆಳಗಾವಿಗೆ ಗಪ್ಚುಪ್ ಆಗಿ ಭೇಟಿ ಕೊಟ್ಟು ವಾಪಸ್ ಆಗಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕರ್ಜತ್-ಜಮ್ಕೆಡ್ ವಿಧಾನಸಭೆ ಕ್ಷೇತ್ರದ ಎನ್ಸಿಪಿ ರೋಹಿತ್ ಪವಾರ್ ಬೆಳಗಾವಿಗೆ ಭೇಟಿ ನೀಡಿ ವಾಪಸ್ ತೆರಳಿದ್ದಾರೆ. ನಿನ್ನೆ ರಾತ್ರಿ ಕೊಲ್ಲಾಪುರ- ಕುಗನೊಳ್ಳಿ ಮಾರ್ಗವಾಗಿ ರೋಹಿತ್ ಪವಾರ್ ಬೆಳಗಾವಿಗೆ ಆಗಮಿಸಿದ್ದರು. ಅನಾರೋಗ್ಯಕ್ಕೆ ತುತ್ತಾಗಿರುವ ಎಂಇಎಸ್ ಬೆಳಗಾವಿ ನಗರ ಅಧ್ಯಕ್ಷ ದೀಪಕ್ ದಳವಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಇಂದು ಬೆಳಗ್ಗೆ ಬೆಳಗಾವಿ ತಾಲೂಕಿನ ವಿವಿಧ ಭಾಗಗಳಿಗೆ ರೋಹಿತ್ ಪವಾರ್ ಭೇಟಿ ನೀಡಿದ್ದು, ಅದರಲ್ಲಿ ಪ್ರಮುಖವಾಗಿ ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್ಗೆ ತುತ್ತಾದ 11 ಎಂಇಎಸ್ ಕಾರ್ಯಕರ್ತರು, ಗೋಲಿಬಾರ್ನಲ್ಲಿ ಮೃತರಾದವರ ಹೆಸರಿನಲ್ಲಿ ಹಿಂಡಲಗಾ ಗ್ರಾಮದಲ್ಲಿರುವ ಹುತಾತ್ಮ ಸ್ಮಾರಕ ನಿರ್ಮಾಣಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಅಲ್ಲಿಂದ ಯಳ್ಳೂರ ಗ್ರಾಮದಲ್ಲಿರುವ ಮಹಾರಾಷ್ಟ್ರ ಹೈಸ್ಕೂಲ್ಗೆ ರೋಹಿತ್ ಪವಾರ್ ಭೇಟಿ ನೀಡಿದ್ದಾರೆ. ಎನ್ಸಿಪಿ ಶಾಸಕ ರೋಹಿತ್ ಪವಾರ್ಗೆ ಸ್ಥಳೀಯ ಎಂಇಎಸ್ ಕಾರ್ಯಕರ್ತರು ಸಾಥ್ ನೀಡಿದ್ದರು. ಇದನ್ನೂ ಓದಿ: ಚೀನಾ ಸೈನಿಕರು ಗಡಿ ನುಸುಳುವುದನ್ನು ಭಾರತ ತಡೆದಿದೆ; ನಮ್ಮ ಯೋಧರ ಧೈರ್ಯಕ್ಕೆ ಸಲಾಂ – ರಾಜನಾಥ್ ಸಿಂಗ್
ಗಡಿಗಾಗಿ ಹೋರಾಡಿದ ತ್ಯಾಗ ವ್ಯರ್ಥ ಆಗಬಾರದು: ಇದೇ ವೇಳೆ ಮಾತನಾಡಿದ ಎನ್ಸಿಪಿ ಶಾಸಕ ರೋಹಿತ್ ಪವಾರ್, ಕಳೆದ 60 – 70 ವರ್ಷಗಳಿಂದ ಇಲ್ಲಿಯ ಮರಾಠಿ ಭಾಷಿಕರು ಹೋರಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಅಸ್ಮಿತೆಯ ಹೋರಾಟ ಶುರುವಾಗಿದೆ. ನಮ್ಮ ಧ್ವನಿ ಹತ್ತಿಕ್ಕುವ ಯತ್ನ ನಡೆಯುತ್ತಿದೆ. ನಮ್ಮ ಅಸ್ಮಿತೆಗೆ ಧಕ್ಕೆ ತರುವ ಯತ್ನ ನಡೆಯುತ್ತಿದೆ. ಸಾಮಾಜಿಕ ಕಾರ್ಯಕರ್ತ ಮಹಾರಾಷ್ಟ್ರ ನಾಗರಿಕನಾಗಿ ಇಷ್ಟೇ ಹೇಳುತ್ತೇನೆ. ಗಡಿಗಾಗಿ ಹೋರಾಟ ಹಾಗೂ ತ್ಯಾಗ ಮಾಡಿದ್ದು, ವ್ಯರ್ಥ ಆಗಬಾರದು. ಮಹಾರಾಷ್ಟ್ರ ಸಹ ಇದು ನಮ್ಮ ಒಂದು ಭಾಗ ಅಂತಾ ಯೋಚಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ