– ವಾಟ್ಸಪ್ನಲ್ಲಿ ಡೆತ್ ನೋಟ್ ಕಳುಹಿಸಿ ಜೀವಬಿಟ್ರು
– ಆಸ್ತಿಗಾಗಿ ಸಂಬಂಧಿಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ
ಮುಂಬೈ: 4 ವರ್ಷದ ಮಗಳನ್ನು ನೇಣು ಹಾಕಿ ಕೊಲೆಗೈದ ಬಳಿಕ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ವಕ್ಲಾನ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ರೈಸ್ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ವಕ್ಲಾನ್ ನಿವಾಸಿ ಶಿವರಾಮ್ ಪಾಟೀಲ್(39), ಪತ್ನಿ ದೀಪಿಕಾ ಆತ್ಮಹತ್ಯೆಗೆ ಶರಣಾದ ದಂಪತಿ. ಆಸ್ತಿ ವಿಚಾರಕ್ಕೆ ದಂಪತಿಗೆ ಸಂಬಂಧಿಕರು ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಮನನೊಂದು ಶಿವರಾಮ್, ದೀಪಿಕಾ ಆತ್ಮಹತ್ಯಗೆ ಶರಣಾಗಿದ್ದಾರೆ. ತಾವು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ದಂಪತಿ ತಮ್ಮ 4 ವರ್ಷದ ಮಗಳನ್ನು ನೇಣು ಹಾಕಿ ಕೊಲೆಗೈದಿದ್ದಾರೆ.
ಅಷ್ಟೇ ಅಲ್ಲದೇ ನಮ್ಮ ಸಾವಿಗೆ ಸಂಬಂಧಿಕರೇ ಕಾರಣ. ಅವರ ಕಿರುಕುಳ ತಾಳಲಾರದೇ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವ ಎಂದು 13 ಮಂದಿಯ ಹೆಸರನ್ನು ಉಲ್ಲೇಖಿಸಿ ದಂಪತಿ ಡೆತ್ ನೋಟ್ ಬರೆದಿದ್ದಾರೆ. ಬಳಿಕ ವಾಟ್ಸಪ್ ಮೂಲಕ ಡೆತ್ ನೋಟ್ ಅನ್ನು ದೀಪಿಕಾ ತನ್ನ ಸಹೋದರನಿಗೆ ಕಳುಹಿಸಿದ್ದಾರೆ. ಬಳಿಕ ದಂಪತಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಹರಿದು ಹಾಕಿದ್ದ ಡೆತ್ ನೋಟ್ ಪೇಪರ್ ಪತ್ತೆಯಾಗಿತ್ತು. ಅಲ್ಲದೇ ಸಹೋದರನಿಗೆ ಕಳುಹಿಸಿದ ವಾಟ್ಸಪ್ ಮೆಸೇಜ್ ಕೂಡ ಪೊಲೀಸರಿಗೆ ಸಿಕ್ಕಿತ್ತು. ಈ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ವಿಚಾರಣೆ ನಡೆಸಿದಾಗ 10 ಎಕ್ರೆ ಜಮೀನಿನ ವಿಚಾರಕ್ಕೆ ದಂಪತಿ ಹಾಗೂ ಅವರ ಸಂಬಂಧಿಕರ ನಡುವೆ ಜಗಳ ನಡೆಯುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಆಸ್ತಿಗಾಗಿ ಸಂಬಂಧಿಕರು ದಂಪತಿಗೆ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ನಲ್ಲಿ 13 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
13 ಮಂದಿಯಲ್ಲಿ ಇಬ್ಬರನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಇನ್ನೂ ಉಳಿದ 11 ಮಂದಿ ತಲೆಮರೆಸಿಕೊಂಡಿದ್ದಾರೆ. ಹಾಗೆಯೇ ಜಗಳಕ್ಕೆ ಕಾರಣವಾಗಿರುವ 10 ಎಕ್ರೆ ಜಮೀನನ್ನು ಸಹೋದರನಿಗೆ ನೀಡಿ, ಅದನ್ನು ಆತ ಆನಾಥಾಶ್ರಮಗಳಿಗೆ ನೀಡುತ್ತಾನೆ ಎಂದು ದೀಪಿಕಾ ಹಾಗೂ ಶಿವರಾಮ್ ಡೆತ್ ನೋಟ್ ಅಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.