ಮುಂಬೈ: ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು ಮತ ಎಣಿಕೆ ಆರಂಭವಾಗಿದೆ.
ಲೋಕಸಭಾ ಚುನಾವಣೆ ಬಳಿಕ ಮೊದಲ ವಿಧಾನಸಭಾ ಚುನಾವಣೆ ಇದಾಗಿದ್ದು, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪ್ರತಿಷ್ಠೆಯ ಕಣವಾಗಿತ್ತು. ಇತ್ತ ಕಾಂಗ್ರೆಸ್ಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಪ್ರಶ್ನೆ ಎದುರಾಗಿತ್ತು. ಎರಡು ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡಿದ್ದವು. ಸಮೀಕ್ಷೆಗಳು ಮಾತ್ರ ಮತ್ತೊಮ್ಮೆ ಮೋದಿ-ಅಮಿತಾ ಶಾ ಜೋಡಿಯೇ ಮೇಲುಗೈ ಸಾಧಿಸಲಿವೆ ವಿಚಾರವನ್ನು ಸಮೀಕ್ಷೆಗಳ ಅಂಕಿಗಳು ಸ್ಪಷ್ಟಪಡಿಸಿವೆ.
ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ, ಕಾಂಗ್ರೆಸ್-ಎನ್ಸಿಪಿ ಮೈತ್ರಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಎಕ್ಸಿಟ್ ಪೋಲ್ ಸರ್ವೆಗಳ ಪ್ರಕಾರ ಬಿಜೆಪಿ-ಶಿವಸೇನೆ ಮೈತ್ರಿಯೇ 240+ ಸೀಟು ಗೆದ್ದು ಮತ್ತೆ ಅಧಿಕಾರಕ್ಕೇರಲಿವೆ ಅಂದಿವೆ. ದೇವೇಂದ್ರ ಫಡ್ನವೀಸ್ ಸಿಎಂ, ಶಿವಸೇನೆಯ ಆದಿತ್ಯ ಠಾಕ್ರೆ ಡಿಸಿಎಂ ಆಗುವ ಸಾಧ್ಯತೆ ದಟ್ಟವಾಗಿದೆ. ಅನಿರೀಕ್ಷಿತ ವಿದ್ಯಮಾನಗಳಿಂದ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರಿಗೆ ಮೊದಲ ಹಿನ್ನೆಡೆಯಾಗಲಿದೆ.
ಹರ್ಯಾಣದಲ್ಲಿ ಬಿಜೆಪಿಯ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರೇ ಗೆಲ್ಲಲಿದ್ದಾರೆ ಅಂತ ಬಹುತೇಕ ಎಕ್ಸಿಟ್ ಪೋಲ್ ಸರ್ವೆಗಳು ಹೇಳಿವೆ. ಆದರೆ ಇಂಡಿಯಾ ಟುಡೇ ಮಾತ್ರ ಇದು ಉಲ್ಟಾ ಆಗಲಿದೆ ಎಂದಿದೆ. ಎರಡು ರಾಜ್ಯಗಳ ಜೊತೆಗೆ 18 ರಾಜ್ಯಗಳ 53 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವೂ ಇಂದು ಪ್ರಕಟವಾಗಲಿದೆ. ಮತ ಎಣಿಕೆಗೆ ಸಕಲ ಸಿದ್ಧತೆ ಒಂದ್ಕಡೆಯಾಗಿದ್ರೆ, ಮಗದೊಂದು ಕಡೆ ಬಿಜೆಪಿಗರು ಸಂಭ್ರಮಕ್ಕೆ ತಯಾರಾಗಿದ್ದಾರೆ.