ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿವಾದಕ್ಕೆ ಈಗ ತಿರುವು ಸಿಗುತ್ತದೆ. ಮಹಾರಾಷ್ಟ್ರ ಕ್ಯಾಬಿನೆಟ್ನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ ಇದೆ. ಆದರೆ ಕರ್ನಾಟಕದಲ್ಲಿ ಯಾಕಿಲ್ಲ ಎಂದು ಧಾರ್ಮಿಕ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಂದಿನ ಕಾಂಗ್ರೆಸ್ ಸರ್ಕಾರ 2014 ರಲ್ಲೇ ಒಪ್ಪಿಗೆ ಸೂಚಿಸಿದೆ. ಒಪ್ಪಿಗೆ ಸೂಚಿಸುವ ಮುಂಚೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವನ್ನು ಚರ್ಚೆ ಮಾಡುವುದಕ್ಕೆ ಒಂದು ಕ್ಯಾಬಿನೆಟ್ ಸಮಿತಿ ರಚನೆ ಮಾಡಿದ್ದು, ನಂತರ ಗ್ರೀನ್ ಸಿಗ್ನಲ್ ನೀಡಿತ್ತಂತೆ. ಅಂದಿನ ಮಹಾರಾಷ್ಟ್ರದ ಸರ್ಕಾರದ ಗ್ರೀನ್ ಸಿಗ್ನಲ್ ಆಧಾರವಾಗಿಟ್ಟುಕೊಂಡು ಕರ್ನಾಟಕದಲ್ಲೂ ಪ್ರತ್ಯೇಕ ಧರ್ಮ ಮಾಡಬೇಕು ಎಂದು ಲಿಂಗಾಯತ ಸಮುದಾಯದ ಮುಖಂಡರು ಹಠಕ್ಕೆ ಬಿದ್ದಿದ್ದಾರೆ.
ಇನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ 10 ಮಂದಿ ತಜ್ಞರ ಸಮಿತಿ ರಚನೆಗೆ ಲಿಂಗಾಯಿತ ಮುಖಂಡರು ಪುನಃ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಪದೇ ಪದೇ ಸಮಿತಿಗಳ ರಚನೆಯಿಂದ ಯಾವುದೇ ಅಂತಿಮ ನಿರ್ಧಾರ ಹೊರಬರುವುದಿಲ್ಲ. ಆದ್ದರಿಂದ ಅಂತಿಮ ನಿರ್ಧಾರವನ್ನು ಸರ್ಕಾರದ ಮುಂದೆ ಇಡಬೇಕು ಎಂದು ಸಮುದಾಯಗಳ ಮುಖಂಡರು ವಾದಿಸಿದ್ದಾರೆ.
ಲಿಂಗಾಯುತ ಧರ್ಮದ ಮುಖಂಡರು ಈ ಹೊಸ ದಾಖಲೆಯನ್ನು ಹುಡುಕಿ ಎಲ್ಲರ ಮುಂದೆ ಇಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಉಪಪಂಗಡಗಳನ್ನು ಒಟ್ಟಾಗಿ ಸೇರಿಸಿ ಕ್ಯಾಬಿನೆಟ್ನಲ್ಲಿ ಒಂದು ನೋಟ್ ರೆಡಿ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾಕೆ ಈ ರೀತಿ ಮಾಡುತ್ತಿಲ್ಲ ಎಂದು ಇದರ ಮೂಲಕ ಹೋರಾಟ ಮಾಡಲು ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ವೀರಶೈವ ಲಿಂಗಾಯತ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ಎರಡು ಬಾರಿ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಲಿಂಗಾಯತ ಧರ್ಮ ಅಂತ ಹೋಗುವುದು ಉತ್ತಮ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.