ಮುಂಬೈ: ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿ ಸುಮಾರು 10 ತಿಂಗಳೇ ಕಳೆದಿದೆ. ಕೋವಿಡ್ ಲಸಿಕೆ ಪಡೆಯುವಂತೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ದೇಬಶಿಶ್ ಚಕ್ರವರ್ತಿ (59) ಅವರು ಗುರುವಾರ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.
ಮುಖ್ಯ ಕಾರ್ಯದರ್ಶಿಗಳು ಬೈಕುಲ್ಲಾದ ಜೆಜೆ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಸೀತಾರಾಮ್ ಕುಂಟೆ ಅವರು ನಿವೃತ್ತರಾದ ನಂತರ ಚಕ್ರವರ್ತಿ ಅವರು ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ
ಕೋವಿಡ್ ಲಸಿಕೆ ಬಗ್ಗೆ ಜನತೆಯಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ಆರಂಭದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ವೈದ್ಯರಿಗೆ (ಮುಂಚೂಣಿ ಕಾರ್ಯಕರ್ತರು) ಲಸಿಕೆ ನೀಡಲಾಯಿತು. ಆದರೆ ಹಿರಿಯ ಅಧಿಕಾರಿಗಳು ಎಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂಬ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆರೋಗ್ಯ ವಿಚಾರಕ್ಕೆ ಕೆಲವರು ಅಧಿಕಾರಿಗಳು ತಡವಾಗಿ ಲಸಿಕೆ ಪಡೆದುಕೊಂಡಿರಬಹುದು ಎನ್ನಲಾಗಿದೆ.
ಮುಂಚೂಣಿ ಕಾರ್ಯಕರ್ತರಾಗಿ ತಡವಾಗಿ ಲಸಿಕೆ ಪಡೆದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಸ್, ಲಸಿಕೆ ಪಡೆಯುವುದು ವೈಯಕ್ತಿಕ ವಿಚಾರ. ನಾನು ಯಾವಾಗ ಬೇಕಾದರೂ ಲಸಿಕೆ ಪಡೆದುಕೊಳ್ಳಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಗಾಗಿ ಲಸಿಕೆ ಪಡೆಯಲು ವಿಳಂಭವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐ ಡೋಂಟ್ ಕೇರ್, ಐ ಡೋಂಟ್ ಲೈಕ್ – ಲಸಿಕೆ ಬೇಡವೆಂದು ಹಠ ಹಿಡಿದ ವೃದ್ಧ
ಜ.16ರಿಂದಲೇ ಕೋವಿಡ್ ಲಸಿಕೆ ಅಭಿಯಾನ ಆರಂಭವಾಯಿತು. ಆದರೆ ಚಕ್ರವರ್ತಿ ಅವರು ಈವರೆಗೂ ಲಸಿಕೆ ಪಡೆದುಕೊಂಡಿರಲಿಲ್ಲ. ಈ ತಿಂಗಳಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಲಸಿಕೆ ಪಡೆಯುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ವಿಧಾನ ಭವನ ಪ್ರವೇಶಿಸಲು ಪ್ರತಿಯೊಬ್ಬರೂ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಜೊತೆಗೆ ಲಸಿಕೆಯ ಎರಡು ಡೋಸ್ ಅನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಸಂಸತ್ ವ್ಯವಹಾರಗಳ ಸಚಿವ ಅನಿಲ್ ಪರಬ್ ಸೂಚನೆ ನೀಡಿದ್ದಾರೆ.