Districts
ವರ್ಷದ ಒಳಗಾಗಿ ಅಪ್ಪುಗೌಡಗೆ ಸಚಿವ ಸ್ಥಾನ ನೀಡದಿದ್ರೆ 10 ಶಾಸಕರ ರಾಜೀನಾಮೆ ಕೊಡಿಸ್ತೇನೆ: ಶಿವಾಚಾರ್ಯ ಗುಡುಗು

ಕಲಬುರಗಿ: ಮುಂದಿನ ವರ್ಷದ ಒಳಗಾಗಿ ಅಪ್ಪುಗೌಡರಿಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ಕೊಡದೆ ಹೋದರೆ ಹತ್ತು ಜನ ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಶ್ರೀ ಶೈಲ್ ಸಾರಂಗ ಮಠದ ಪೀಠಾಧಿಪತಿಗಳಾದ ಮಹಾಂತ್ ಶಿವಾಚಾರ್ಯರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶಾಸಕ ದತ್ತಾತ್ರೇಯ ಪಾಟೀಲ್ ಹುಟ್ಟುಹಬ್ಬ ನಿಮಿತ್ತ ಕಲಬುರಗಿಯ ಎನ್.ವಿ ಮೈದಾನದಲ್ಲಿ ಆಯೋಜಿಸಿದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಬಿಜೆಪಿಯನ್ನು ಒಂದು ನಾಯಿ ಸಹ ಕೇಳುತ್ತಿರಲಿಲ್ಲ. ಅಂತಹ ಸಮಯದಲ್ಲಿ ದಿ.ಚಂದ್ರಶೇಖರ್ ಪಾಟೀಲ್ ಪಕ್ಷ ಕಟ್ಟಿದ್ದಾರೆ. ಅವರಿಗೂ ಆಗ ಸಚಿವ ಸ್ಥಾನ ಸಿಗಲಿಲ್ಲ. ಇದೀಗ ಅವರ ಪುತ್ರ ದತ್ತಾತ್ರೇಯ ಪಾಟೀಲ್ (ಅಪ್ಪುಗೌಡ) ಸಚಿವನಾಗಲೇಬೇಕು ಎಂದರು.
ಈ ಕುರಿತು ಬಿ.ಎಸ್.ವೈ ಭೇಟಿ ಮಾಡಿದಾಗ, ಅವರು ಒಂದು ವರ್ಷ ಸಮಯ ಕೇಳಿದ್ದಾರೆ. ವರ್ಷದ ನಂತರ ಸಹ ಸಚಿವ ಸ್ಥಾನ ಸಿಗದಿದ್ದರೆ 10 ಜನ ಶಾಸಕರ ರಾಜೀನಾಮೆ ಕೊಡಿಸುವ ತಾಕತ್ತು ನನಗಿದೆ ಎಂದು ಶಿವಾಚಾರ್ಯ ಗುಡುಗಿದ್ದಾರೆ.
ಯಡಿಯೂರಪ್ಪ ಮತ್ತೆ ಮುಂದಿನ ಐದು ವರ್ಷ ಕೂಡ ಮುಖ್ಯಮಂತ್ರಿ ಆಗಬೇಕು. ಬಿ.ಎಸ್.ವೈ ನಂತರ ಮುಂದಿನ 30 ವರ್ಷಗಳವರೆಗೆ ಯಾರು ಲಿಂಗಾಯತ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಆಗುವುದಿಲ್ಲ. ಮುಂದಿನ ಅವಧಿಗೂ ಯಡಿಯೂರಪ್ಪ ಆರೋಗ್ಯದಲ್ಲಿ ಸಮಸ್ಯೆಯಾದರೆ ಕರುಣಾನಿಧಿಯಂತೆ ಆಸ್ಪತ್ರೆಯಿಂದ ಆಡಳಿತ ನಡೆಸಲಿ ಎಂದು ಮಹಾಂತ್ ಶಿವಾಚಾರ್ಯ ಹೇಳಿದ್ದಾರೆ.
