ಹಾವೇರಿ: ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರು ಸತ್ಯಾಗ್ರಹ ಮಾಡಬೇಕಿರೋದು ಬಿಜೆಪಿ ಕಚೇರಿ ಮುಂದಲ್ಲ. ಬದಲಾಗಿ ಸಿಎಂ ಮನೆ ಮುಂದೆ ಮಾಡಿ ಎಂದು ಖಡಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನೀರಿನ ವಿಚಾರದಲ್ಲಿ ನಾವು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಚರ್ಚಿಸಿದ್ದೇವೆ. ಕುಡಿಯೋ ನೀರಿನ ವಿಚಾರದಲ್ಲಿ ಮನೋಹರ್ ಪರಿಕ್ಕರ್ ಜೊತೆ ಒಂದು ಗಂಟೆಗಳ ಕಾಲ ಚರ್ಚೆ ಮಾಡಿ ಒಂದು ಪತ್ರವನ್ನು ಬರೆದು ಕೊಟ್ಟಿದ್ದೇವೆ. ಆದರೆ ಸಿಎಂ ಸಿದ್ದರಾಮಯ್ಯ ರಾಜ್ಯದ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದರು.
ಗೋವಾ ಮತ್ತು ಮಹಾರಾಷ್ಟ್ರ ಮುಖಂಡರನ್ನ ಒಪ್ಪಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಂದ ಹೇಳಿಕೆ ಕೊಡಿಸಲಿ ಎಂದು ಯಡಿಯೂರಪ್ಪ ಈ ವೇಳೆ ಸವಾಲು ಹಾಕಿದರು.
ನಾನು ಮಹದಾಯಿ ವಿಚಾರದಲ್ಲಿ ರೈತರ ಪರವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ ಸಿಎಂ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮಹದಾಯಿ ಹೋರಾಟಗಾರರು ಸಿಎಂ ಮನೆ ಮುಂದೆ ಸತ್ಯಾಗ್ರಹ ಮಾಡಬೇಕು ಎಂದು ಬಿಎಸ್ವೈ ಒತ್ತಾಯಿಸಿದರು.