ಬೆಂಗಳೂರು: ಮಹದಾಯಿ ವಿವಾದ ನ್ಯಾಯಾಧಿಕರಣದಲ್ಲೇ ಇತ್ಯರ್ಥವಾಗಬೇಕು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು ಕುಡಿಯುವ ನೀರಿನ ಉದ್ದೇಶಕ್ಕೆ ನೀರನ್ನು ಬಳಸಿಕೊಳ್ಳುವುದಕ್ಕೆ ಗೋವಾದ ತಾತ್ವಿಕ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಗೋವಾ ಪ್ರಜೆಗಳು ಹೆದರುವ ಅಗತ್ಯವಿಲ್ಲ: ಪರಿಕ್ಕರ್
ಪತ್ರದಲ್ಲಿ ಏನಿದೆ?
ಮಾನ್ಯ ಯಡಿಯೂರಪ್ಪನವರೇ,
ಡಿಸೆಂಬರ್ 20 ರಂದು ನೀವು ಬರೆದ ಪತ್ರ ನನಗೆ ತಲುಪಿದೆ. ತಾವು ಉತ್ತರ ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಮಹದಾಯಿಯಿಂದ 7.56 ಟಿಎಂಸಿಯಷ್ಟು ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಸಂಬಂಧ ಪತ್ರ ಬರೆದಿದ್ದೀರಿ. ಈ ವಿವಾದ ನ್ಯಾಯಾಧೀಕರಣದ ಮುಂದೆ ಇರುವುದು ನಿಮಗೆ ಗೊತ್ತೇ ಇದೆ. ಕುಡಿಯುವ ನೀರು ವಿವಾದ ಕೂಡಾ ನ್ಯಾಯಾಧಿಕರಣದ ಮುಂದಿದೆ. ಕುಡಿಯುವ ನೀರಿನ ಉದ್ದೇಶಕ್ಕೆ ನೀರನ್ನು ಬಳಸಿಕೊಳ್ಳುವುದಕ್ಕೆ ಗೋವಾದ ತಾತ್ವಿಕ ವಿರೋಧ ಇಲ್ಲ.
ಈ ಸಂಬಂಧ ನ್ಯಾಯಾಧಿಕರಣ ತೀರ್ಮಾನದಂತೆ ದ್ವಿಪಕ್ಷೀಯ ಮಾತುಕತೆಗೆ ನಾವು ಸಿದ್ಧರಿದ್ದೇವೆ. ಮಾನವೀಯ ಆಧಾರದ ಮೇಲೆ ಕುಡಿಯುವ ನೀರು ಕೇಳುತ್ತಿರುವುದು ಗೋವಾಕ್ಕೆ ಅರ್ಥವಾಗುತ್ತದೆ. ಬರ ಪೀಡಿತ ಪ್ರದೇಶಗಳಿಗೆ ಮಾನವೀಯ ಆಧಾರದ ಮೇಲೆ ನೀರು ಒದಗಿಸುವ ಸಂಬಂಧ ಸೌಹಾರ್ದ ಮಾತುಕತೆಗೆ ಸಿದ್ಧರಿದ್ದೇವೆ.
ಆದರೆ ನಾವು ನ್ಯಾಯಾಧಿಕರಣದ ಎದುರು ಎತ್ತಿರುವ ನಮ್ಮ ಹಿತಾಸಕ್ತಿ ಮತ್ತು ನಮ್ಮ ವಿರೋಧಗಳಿಗೆ ಧಕ್ಕೆಯಾಗದಂತೆ ಪೂರ್ವಾಗ್ರಹವಿಲ್ಲದೇ ಈ ಮಾತುಕತೆಗೆ ಸಿದ್ಧರಿದ್ದೇವೆ.
ಧನ್ಯವಾದಗಳು.