ಕಣ್ಣೂರು: ಕಾಸರಗೋಡಿನ ಸ್ಥಳೀಯ ಮಸೀದಿಗೆ ಹೊಂದಿಕೊಂಡಿರುವ ರೂಮಿನಲ್ಲಿ ಮಡಿಕೇರಿಯ ಕೊಡಗು ಮೂಲದ ಶಿಕ್ಷಕರೊಬ್ಬರು ಬರ್ಬರ ಕೊಲೆಯಾದ್ದಾರೆ. ಸೋಮವಾರ ರಾತ್ರಿ ಕೊಲೆ ನಡೆದಿದ್ದು, ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದೆ.
ಕೊಡಗು ಮೂಲದ ರಿಯಾಜ್(34) ಕೊಲೆಯಾದ ಶಿಕ್ಷಕ. ಕಳೆದ 9 ವರ್ಷಗಳಿಂದ ಇಲ್ಲಿನ ಮದರಸಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಇವರು, ಇಲ್ಲಿನ ಮುಹಾಯುದ್ದೀನ್ ಜುಮಾ ಮಸೀದಿಗೆ ಹೊಂದಿಕೊಂಡಿರುವ ಕೊಠಡಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ನಡೆದಿದ್ದೇನು?: ಮಧ್ಯರಾತ್ರಿ ಕೊಠಡಿಯೊಳಗಿಂದ ಜೋರಾಗಿ ಕಿರುಚಾಡೋ ಶಬ್ದ ಕೇಳಿಸಿತ್ತು. ಅಂತೆಯೇ ಏನಾಯ್ತು ಎಂದು ಬಾಗಿಲು ತೆರೆದು ನೋಡುವಷ್ಟರಲ್ಲಿ ಕೊಠಡಿಯ ಮೇಲೆ ಯದ್ವಾತದ್ವವಾಗಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸುತ್ತಿದ್ದರು. ಕೂಡಲೇ ಬಾಗಿಲು ಹಾಕಿಕೊಂಡು ಇನ್ನೊಂದು ಬಾಗಿಲಿನ ಮೂಲಕ ಮಸೀದಿಯೊಳಗಡೆ ಹೋಗಿ ಅಲ್ಲಿರುವ ಮಂದಿಯ ಜೊತೆ ಹೇಳಿದೆ. ತಕ್ಷಣವೇ ಎಲ್ಲರೂ ಶಬ್ದ ಕೇಳಿದ ಕೊಠಡಿಯೊಳಗೆ ಹೋಗಿ ನೋಡಿದಾಗ ರಿಯಾಜ್ ಕುತ್ತಿಗೆಗೆ ಕಡಿದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದ್ರೆ ದಾರಿ ಮಧ್ಯೆದಲ್ಲಿ ಸಾವನಪ್ಪಿದ್ದಾರೆ ಅಂತಾ ರಿಯಾಜ್ ಪಕ್ಕದ ಕೊಠಡಿಯ ವ್ಯಕ್ತಿ ಮಾಹಿತಿ ನೀಡಿದ್ದಾರೆ.
ಹರತಾಳ ಜಾರಿಗೆ: ಸದ್ಯ ರಿಯಾಜ್ ಹತ್ಯೆ ಖಂಡಿಸಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹರತಾಳಕ್ಕೆ ಕರೆ ನೀಡಲಾಗಿದೆ. ಇನ್ನು ಪೊಲೀಸರ ಸಹಾಯದಿಂದ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಅಂತಾ ಕಾಸರಗೋಡು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಘಟನೆಯಿಂದ ಎಚ್ಚೆತ್ತುಕೊಂಡ ಪೊಲೀಸರು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.