ಚೆನ್ನೈ: ಅಯೋಧ್ಯಾ ಮಂಟಪವನ್ನು ಸ್ವಾಧೀನಪಡಿಸಲು ಹೊರಡಿಸಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
ಇಲ್ಲಿನ ಅಯೋಧ್ಯಾ ಮಂಟಪದ ವ್ಯವಹಾರಗಳನ್ನು ನಿರ್ವಹಿಸುವ ಶ್ರೀರಾಮ ಸಮಾಜದ ವಿರುದ್ಧ ಹಣಕಾಸಿನ ದುರುಪಯೋಗ, ತೆರಿಗೆ ವಂಚನೆ ಮತ್ತು ಇತರ ಅಕ್ರಮಗಳು ನಡೆದಿದೆ ಎನ್ನುವ ಬಗ್ಗೆ ಅನೇಕ ದೂರುಗಳನ್ನು ನ್ಯಾಯಾಲಯ ಸ್ವೀಕರಿಸಿತ್ತು ನಂತರ, ಮಂಟಪದ ಆಡಳಿತವನ್ನು ನಿರ್ವಹಿಸಲು ತಮಿಳುನಾಡು ಸರ್ಕಾರವು ಸೂಕ್ತ ವ್ಯಕ್ತಿ ನೇಮಕ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನು ಸೇರಲು ನಿರಾಕರಿಸಿದ ಪ್ರಶಾಂತ್ ಕಿಶೋರ್
ಸದ್ಯ ನ್ಯಾಯಾಲಯವು ಈ ಆರೋಪಗಳ ಬಗ್ಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ತನಿಖೆ ನಡೆಸಲು ಪೂರ್ಣ ಸ್ವಾತಂತ್ರ್ಯ ನೀಡಿದೆ. ವಿಚಾರಣೆ ಮುಗಿಯುವವರೆಗೆ ನ್ಯಾಯಾಲಯವು ಮಂಟಪದ ಸಂಪೂರ್ಣ ನಿಯಂತ್ರಣ ಶ್ರೀರಾಮ ಸಮಾಜಕ್ಕೆ ನೀಡಿದೆ. ಈ ಬಗ್ಗೆ ಬುಧವಾರ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ
ಏಪ್ರಿಲ್ 12 ರಂದು, ಪಶ್ಚಿಮ ಮಾಂಬಲಮ್ನಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಾಗ ಅಯೋಧ್ಯಾ ಮಂಟಪದ ಹೊರಗೆ ಗದ್ದಲ ಉಂಟಾಯಿತು. ಇಲಾಖೆಯ ಕ್ರಮದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಅಲ್ಲಿ ಯಾವುದೇ ಭಜನೆ ಅಥವಾ ಸತ್ಸಂಗ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಚೀನಾದಿಂದ ಟೆಸ್ಲಾ ಕಾರುಗಳನ್ನ ಆಮದು ಮಾಡಿಕೊಂಡು ಭಾರತದಲ್ಲಿ ಮಾರುವ ಹಾಗಿಲ್ಲ: ಗಡ್ಕರಿ
ಶ್ರೀರಾಮ ಸಮಾಜದ ವಿರುದ್ಧ ಹಣ ದುರುಪಯೋಗದ ಬಗ್ಗೆ ದೂರುಗಳು ಬಂದಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಸ್ಪಷ್ಟಪಡಿಸಿದ್ದರು. ಅಯೋಧ್ಯಾ ಮಂಟಪವು ಸಾರ್ವಜನಿಕ ದೇವಾಲಯವಾಗಿದೆ. ಏಕೆಂದರೆ ಇಲ್ಲಿನ ಹುಂಡಿಗೆ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ ಪೂಜೆ ನಡೆದರೂ ಮೂರ್ತಿ ಪ್ರತಿಷ್ಠಾಪಿಸದ ಕಾರಣ ಇದು ದೇವಸ್ಥಾನವಲ್ಲ ಎಂದು ಶ್ರೀರಾಮ ಸಮಾಜ ಪ್ರತಿಪಾದಿಸಿತ್ತು.