ಮಡಿಕೇರಿ: ಕಾಡಿನ ಹಕ್ಕಿಗಳು ಕಾಡಿನಲ್ಲಿ ಅಲೆದಾಡಿಕೊಂಡು ಸಿಕ್ಕಸಿಕ್ಕಕಡೆ ಕಾನನದ ನಡುವೆ ಸೊಪ್ಪನ್ನು ತಿಂದು ಬದುಕುತ್ತವೆ. ಅಂತೆಯೇ ಏನೂ ಅರಿಯದ ಮುಗ್ಧ ಆದಿವಾಸಿಗಳು ದಟ್ಟಾರಣ್ಯ ಪ್ರದೇಶದಲ್ಲಿ ತಮ್ಮ ಜೀವನ ರೂಪಿಸಿಕೊಂಡು ತಮ್ಮ ಪಾಡಿಗೆ ತಾವು ಕಾಲ ಕಳೆಯುತ್ತಿರುತ್ತಾರೆ. ಇವರ ಆಚಾರವಿಚಾರ ಎಲ್ಲವೂ ವಿಭಿನ್ನವಾಗಿರುತ್ತದೆ. ಈ ಮಧ್ಯೆ ಈ ಆದಿವಾಸಿಗಳೆಲ್ಲಾ ಒಂದೆಡೆ ಸೇರಿ ತಮ್ಮ ಕಾಡು ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.
ಕೊಡಗು ಜಿಲ್ಲೆ ಹೇಳಿ ಕೇಳಿ ಬೆಟ್ಟಗುಡ್ಡದ ಪ್ರದೇಶ ಕಾಡಿನಲ್ಲಿ ವಾಸಿಸುವ ಕೊಡಿನ ಮಲೆಕುಡಿಯ ಬುಡುಕಟ್ಟು ಜನಾಂಗದವರು ಇಂದಿಗೂ ಹೊರ ಜಗತ್ತಿನ ಬಗ್ಗೆ ಹೆಚ್ಚು ಅರಿವು ಇಲ್ಲ. ಆದರೆ ಇವರು ವರ್ಷಕ್ಕೆ ಒಂದು ಬಾರಿ ಕಾಡಿನಲ್ಲಿ ಕಾಡಿನ ದೇವರನ್ನು ಆರಾಧನೆ ಮಾಡಿಕೊಂಡು ತಮ್ಮ ಸಂಪ್ರದಾಯವನ್ನು ಇಂದಿಗೂ ತಮ್ಮ ಆಚಾರ ವಿಚಾರ ಪದ್ಧತಿಯನ್ನು ಜೀವಂತವಾಗಿ ಇಟ್ಟುಕೊಂಡು ಬಂದಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪ ಇರುವ ಕೊಡಗಿನ ಅತಿ ಎತ್ತರದ ಬೆಟ್ಟ ತಡಿಯಂಡಮೋಳು ಬೆಟ್ಟದಲ್ಲಿ ಈ ಕಾಡಿನ ಹಬ್ಬವನ್ನು ಆದಿವಾಸಿ ಜನರು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ ಈ ಜನಗಳು ಮೂರು ದಿನಗಳ ಕಾಲ ಬೆಟ್ಟದ ತುದಿಯಲ್ಲಿ ಇದ್ದು ಹಾಡು ಕುಣಿತ ಮಾಡುವ ಮೂಲಕ ಸಾಂಪ್ರದಾಯಿಕ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಅಷ್ಟೇ ಅಲ್ಲ ಈ ಆದಿವಾಸಿಗಳು ಈಗಿನ ಕಾಲದ ಅತ್ಯಾಧುನಿಕ ಪರಿಕರಗಳನ್ನು ನಾಚಿಸುವಂತೆ ಪ್ರಾಚೀನ ಕಾಲದ ವಾದ್ಯೋಪಗಳಾದ ಬಿಂದಿಗೆ, ತಗಡು, ಡಬ್ಬ, ಬಿದಿರು ಮರದ ಪರಿಕರಗಳು, ಚರ್ಮದ ಬಂಡೆ ಮುಂತಾದ ವಸ್ತುಗಳಿಂದ ಸಂಗೀತದ ವಿವಿಧ ಪರಿಕರಗಳನ್ನು ತಾವೇ ತಯಾರಿಸಿಕೊಂಡು ಹಿತವಾದ ಸಂಗೀತ ನುಡಿಸುತ್ತಾರೆ. ಈ ಸಂಗೀತದ ಲಯಕ್ಕೆ ತಕ್ಕಂತೆ ಸುತ್ತಮುತ್ತಲಿನ ವಿವಿಧ ಹಾಡಿಯಿಂದ ಬಂದಿದ್ದ ಕಾನನವಾಸಿಗಳು ಕುಣಿದು ಕುಪ್ಪಳಿಸುತ್ತಾರೆ.