ಮಸೀದಿಯೊಳಗೆ ಮುಸ್ಲಿಂ ಮಹಿಳೆ ಪ್ರಾರ್ಥನೆ ಮಾಡಿದ್ದಕ್ಕೆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ!

Public TV
2 Min Read
MADIKERI MUSLIM FAMILY 3

– 25-30 ವರ್ಷಗಳ ಹಿಂದೆ ಮಾಡಿದ್ದಕ್ಕೆ ಶಿಕ್ಷೆ

ಮಡಿಕೇರಿ: 25-30 ವರ್ಷಗಳ ಹಿಂದೆ ಮುಸ್ಲಿಂ ಮಹಿಳೆಯೊಬ್ಬರು ಮಸೀದಿಯೊಳಗೆ ತೆರಳಿ ಪ್ರಾರ್ಥನೆ ಮಾಡಿದ್ದಕ್ಕೆ ಆಕೆಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಪ್ರಸಂಗವೊಂದು ನಡೆದಿರುವ ಬಗ್ಗೆ ಬಯಲಾಗಿದೆ.

MADIKERI MUSLIM FAMILY

ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರಫೀಕ್ ಎಂಬವರು ಕಳೆದ 30 ವರ್ಷಗಳ ಹಿಂದೆ ಕೇರಳ ಮೂಲದ ಮಹಿಳೆಯೋರ್ವರನ್ನು ಮದುವೆ ಆಗಿ ಈ ಗ್ರಾಮಕ್ಕೆ ಕರೆತರುತ್ತಾರೆ. ಮದುವೆ ಅರಂಭದ ದಿನಗಳಲ್ಲಿ ಗ್ರಾಮದಲ್ಲಿರುವ ಮಸೀದಿಯಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಅವಕಾಶ ಇಲ್ಲದೇ ಇರುವುದರಿಂದ ವಿರಾಜಪೇಟೆ (Virajpete) ನಗರದಲ್ಲಿರುವ ಮಸೀದಿಗೆ ತೆರಳಿ ಪ್ರಾರ್ಥನೆ ಮಾಡಿದ್ದಾರೆ. ಈ ಒಂದೇ ಕಾರಣಕ್ಕೆ ಗ್ರಾಮದ ಮಸೀದಿಯಲ್ಲಿ ಇರುವ ಮುಖಂಡರು ಈ ಕುಟುಂಬಕ್ಕೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಿದ್ದಾರೆ. ಊರಿನ ಯಾರು ಇವರೊಂದಿಗೆ ಮಾತನಾಡಬಾರದು ಆಟೋದಲ್ಲಿ ಹತ್ತಿಸಬಾರದು ಅವರನ್ನು ಮಾತನಾಡಿದ್ರೆ ಅವರಿಗೆ 5,000 ರೂ. ದಂಡ ಹಾಕುವುದಾಗಿ ಎಚ್ಚರಿಕೆ ನೀಡಿ ನೋಟಿಸ್ ನೀಡಿದ್ದಾರೆ. ಇದರಿಂದ ಈ ಗ್ರಾಮದ ಜನರು ಈ ಕುಟುಂಬ ಸದಸ್ಯರೊಂದಿಗೆ ಕಳೆದ 30 ವರ್ಷಗಳಿಂದ ಮಾತನಾಡಿಲ್ಲ. ಹೀಗಾಗಿ ಈ ಕುಟುಂಬ ದಿನನಿತ್ಯ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುತ್ತಿದೆ.

ಈ ನಡುವೆ ಕುಟುಂಬದ ಯಜಮಾನ ರಫೀಕ್ ಎಂಬವರು ಕಳೆದ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ರಫೀಕ್ ಅವರಿಗೆ ಇಬ್ಬರು ಪತ್ನಿಯರು ಇರುವುದರಿಂದ ಮೃತಪಟ್ಟ ರಫೀಕ್ ಅವರ ಮೃತದೇಹವನ್ನು ಬಹಿಷ್ಕಾರವಾದ ಕುಟುಂಬಕ್ಕೆ ಕೊಡದೇ ಏಕಾಏಕಿಯಾಗಿ ಮೊದಲ ಹೆಂಡತಿ ಮನೆಗೆ ಮಸೀದಿಯ ಮುಖಂಡರು ಎಳೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇಷ್ಟು ವರ್ಷ ತಮ್ಮ ಮನೆಯಲ್ಲೇ ಇದು ಜೀವ ಹೋಗುವ ಕೊನೆಯ ದಿನದವರೆಗೂ ನಮ್ಮ ಜೊತೆ ಜೀವನ ಮಾಡಿದ್ರು. ಆದರೆ ಇದೀಗ ತಮಗೆ ಹಾಗೂ ತಮ್ಮ ಮಕ್ಕಳಿಗೆ ಮೃತದೇಹವನ್ನು ನೋಡಲು ಅವಕಾಶವನ್ನು ಗ್ರಾಮಸ್ಥರು ಮಾಡಿಕೊಡಲಿಲ್ಲ. ಒಂದು ವೇಳೆ ಮೃತದೇಹವನ್ನು ನೀವು ನೋಡಿದ್ರೆ ತಾವೇ ಅಂತ್ಯಕ್ರಿಯೆ ಮಾಡಿಕೊಳ್ಳಿ ಗ್ರಾಮಸ್ಥರು ಅಥವಾ ಇತರೆ ಕುಟುಂಬಸ್ಥರು ಸೇರುವುದಿಲ್ಲ ಎಂದು ಹೇಳಿದ್ದಾರೆ. ಇದು ಯಾವ ನ್ಯಾಯ ಸ್ವಾಮಿ. ಬಹಿಷ್ಕಾರ ಹಾಕಿದ್ರು ಇದೀಗ ಈ ರೀತಿಯ ಹಿಂಸೆಯನ್ನು ನೀಡಲು ಮುಂದಾಗಿದ್ದಾರೆ. ಪ್ರಜಾಪ್ರಭುತ್ವ ಈ ದೇಶದಲ್ಲಿ ಇದೆಯಾ ಎಂದು ಪ್ರಶ್ನಿಸುವ ಮೂಲಕ ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ.

MADIKERI MUSLIM FAMILY 1

ಒಟ್ಟಿನಲ್ಲಿ ಬೇರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ರು ಎಂದು ತಿಳಿದ ಗ್ರಾಮದ ಮಸೀದಿಯ ಮುಖಂಡರು, ಈ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ನೀಡುತ್ತಿರುವುದು ನೋಡಿದ್ರೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿರುವುದು ನಿಜಕ್ಕೂ ದುರಂತವೇ ಸರಿ. ಇದನ್ನೂ ಓದಿ: ಬಳೆ ವ್ಯಾಪಾರಿಗಳ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ

Share This Article