ಮಡಿಕೇರಿ: ಹಿಜಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಕಾಲೇಜಿನಿಂದ ಹೊರಗೆ ಕಳುಹಿಸಿದ್ದು, ಈ ವೇಳೆ ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಹಿಜಬ್ ಧರಿಸಿ ಕಾಲೇಜಿನ ಆವರಣಕ್ಕೆ ಬಂದ ವಿದ್ಯಾರ್ಥಿನಿಯರು ತರಗತಿಗೆ ಹೋಗಲು ಅವಕಾಶ ನೀಡುವಂತೆ ಪ್ರಾಂಶುಪಾಲರಾದ ವಿಜಯ್ ಅವರಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ಹಿಜಬ್ ತೆಗೆದಿಡಲು ವ್ಯವಸ್ಥೆ ಮಾಡಿರುವ ವಿಶೇಷ ಕೊಠಡಿಗೆ ಕಳುಹಿಸಿದ್ದಾರೆ. ಆದರೆ ಕೊಠಡಿಯಲ್ಲಿ ಹಿಜಬ್ ತೆಗೆಯದೇ ತರಗತಿಗೆ ಹೋಗಲು ವಿದ್ಯಾರ್ಥಿನಿಯರು ಹಟ ಹಿಡಿದಿದ್ದಾರೆ. ಇದನ್ನೂ ಓದಿ: ತಂದೆ, ಚಿಕ್ಕಪ್ಪನೊಂದಿಗೆ ಅಖಿಲೇಶ್ ಯಾದವ್ ಭರ್ಜರಿ ಚುನಾವಣಾ ಪ್ರಚಾರ
ಪ್ರಾಂಶುಪಾಲರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದ್ದಾರೆ. ಆದರೂ ಹೊರಗೆ ಹೋಗದ ಕೆಲವು ವಿದ್ಯಾರ್ಥಿನಿಯರನ್ನು ಅರೆಸ್ಟ್ ಮಾಡುವಂತೆ ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿ ನಡೆದಿದ್ದು, ಹಿಜಬ್ ನಮ್ಮ ಹಕ್ಕು. ನಾವು ಮೊದಲಿನಿಂದಲೂ ಹಾಕುತ್ತಿದ್ದೇವೆ. ಹೈಕೋರ್ಟ್ ಹೇಳಿದಂತೆ ನಮಗೆ ಮಾಡಲು ಆಗುವುದಿಲ್ಲ ಎಂದು ವಿದ್ಯಾರ್ಥಿನಿಯರು ವಾದ ಮಾಡಿದ್ದಾರೆ.
ಈ ವೇಳೆ ಪ್ರಾಂಶುಪಾಲರು ಬೋರ್ಡ್ನಲ್ಲಿ ಯೂನಿಫಾರ್ಮ್ ಹಾಕಿಕೊಂಡು ಬರಬೇಕು. ಹಿಜಬ್ ಧರಿಸಬಾರದು ಎಂದು ಬರೆದಿಲ್ವಾ? ಯಾರದ್ದೋ ಮಾತು ಕೇಳಿ, ಬೇರೆ ಮಕ್ಕಳಿಗೆ ತೊಂದರೆ ಕೊಡಬೇಡಿ. ಹೈಕೋರ್ಟ್ನಿಂದ ಆದೇಶವಿದ್ದು ಅದನ್ನು ಇಲ್ಲಿ ಪಾಲನೆ ಮಾಡುತ್ತೇವೆ. ಹಿಜಬ್ ತೆಗೆದಿಟ್ಟು ತರಗತಿಗೆ ಬನ್ನಿ ಇಲ್ಲ ಬರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ
ಈ ವೇಳೆ ವಿದ್ಯಾರ್ಥಿನಿಯರು ಹಾಗಾದರೆ ನಮಗೆ ಶಾಲಾ ಹಾಜರಾತಿ ಕೊಡಿ ಹೋಗುತ್ತೇವೆ. ಇಷ್ಟು ದಿನದಿಂದ ನಾವು ಹಿಜಬ್ ಹಾಕಿಕೊಂಡೇ ಬರುತ್ತಿದ್ದೇವು. ಮುಂದೆ ನಮ್ಮ ಪರವಾಗಿ ಆದೇಶ ಬರಬಹುದು ಎಂದಿದ್ದಾರೆ. ಇದಕ್ಕೆ ಪ್ರಾಂಶುಪಾಲರು ಹಾಜರಾತಿಯನ್ನು ನೀಡಲು ಆಗುವುದಿಲ್ಲ. ಇಷ್ಟು ದಿನ ಕೋರ್ಟ್ ಆದೇಶ ಇರಲಿಲ್ಲ. ನಾವು ಮಕ್ಕಳನ್ನು ಕೂರಿಸಿ ಪಾಠ ಮಾಡಿದ್ದೇವೆ. ಹಿಜಬ್ ಧರಿಸುವುದಿಲ್ಲ ಎಂದರೆ ಕಾಲೇಜಿಗೆ ಬರುವುದು ಬೇಡ. ಹಿಜಬ್ ತೆಗೆಯುವುದಿಲ್ಲ ಎಂದರೆ ವಾಪಸ್ ಹೋಗಿ. ಹೈಕೋರ್ಟ್ ಮುಂದಿನ ಆದೇಶ ಬಂದ ನಂತರವೇ ಬನ್ನಿ ಎಂದು ಕಿಡಿಕಾರಿದ್ದಾರೆ.
ವಿದ್ಯಾರ್ಥಿನಿಯರು ನಾವು ಹೋಗುವುದಿಲ್ಲ. ಇಲ್ಲೇ ಪ್ರತಿಭಟನೆ ಮಾಡುತ್ತೇವೆ ಎಂದಾಗ ಗರಂ ಆದ ಪ್ರಾಂಶುಪಾಲರು ಇವರನ್ನು ಅರೆಸ್ಟ್ ಮಾಡಿ ನಾನು ಎಫ್ಐಆರ್ ಮಾಡ್ತೀನಿ ಎಂದು ಪೊಲೀಸರಿಗೆ ಹೇಳಿದಾಗ ವಿದ್ಯಾರ್ಥಿಗಳು ಕಾಲೇಜಿನಿಂದ ಮನೆ ಕಡೆ ತೆರಳಿದರು. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ