ಮಡಿಕೇರಿ: ಕೊರೊನಾ ಮಹಾಮಾರಿಗೆ ದೇಶವೇ ಲಾಕ್ಡೌನ್ ಆದ ಪರಿಣಾಮ ಊಟವಿಲ್ಲದೆ ಬಳಲುತ್ತಿದ್ದ ಕೂಲಿ ಕಾರ್ಮಿಕರ ಹಸಿವಿಗೆ ಪೊಲೀಸ್ ಹೃದಯ ಸ್ಪಂದಿಸಿದೆ.
ಶಿವಮೊಗ್ಗದ ಐಹೊಳೆಯಿಂದ ಕೂಲಿ ಕೆಲಸ ಅರಸಿ ಕೊಡಗಿಗೆ ಬಂದಿದ್ದ ಐದು ಕುಟುಂಬಗಳು ಮಡಿಕೇರಿ ಬಸ್ ನಿಲ್ದಾಣದ ಹಿಂಬದಿಯಲ್ಲಿ ಗುಡಿಸಲು ನಿರ್ಮಿಸಿಕಕೊಂಡು ಬದುಕು ದೂಡುತ್ತಿವೆ. ಆದರೆ ಕೊರೊನಾ ವೈಸರ್ ಹರಡುವುದನ್ನು ನಿಯಂತ್ರಿಸಲು ದೇಶವೇ ಲಾಕ್ಡೌನ್ ಆಗಿದ್ದರಿಂದ ಈ ಕುಟುಂಬಗಳು ಶನಿವಾರದಿಂದಲೂ ಊಟವಿಲ್ಲದೆ ಪರದಾಡುತ್ತಿದ್ದವು. ಮಕ್ಕಳಿಗೂ ಆಹಾರ ನೀಡಲಾಗದೇ ಕುಟುಂಬಗಳು ಕಂಗಲಾಗಿದ್ದವು.
ಈ ಮನಕಲಕುವ ದೃಶ್ಯಕಂಡ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ತಕ್ಷಣವೇ ವರದಿಗೆ ಸ್ಪಂದಿಸಿದ ಮಡಿಕೇರಿ ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ ಮಾದಪ್ಪ ಮತ್ತು ಸಿಬ್ಬಂದಿ ಹಸಿವಿನಿಂದ ಬಳಲುತ್ತಿದ್ದ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಇನ್ನು ನಾಲ್ಕೈದು ದಿನಗಳಿಗೆ ಬೇಕಾಗುವಷ್ಟು ದಿನಸಿ ವಸ್ತುಗಳನ್ನು ಪೂರೈಕೆ ಮಾಡಿದ್ದಾರೆ. ಈ ಮೂಲಕ ಕರ್ತವ್ಯದ ಜೊತೆಗೆ ಮಾನವೀಯತೆಯನ್ನು ಮೆರೆದು, ಪೊಲೀಸ್ ಹೃದಯವಂತಿಕೆ ಎಂತಹದ್ದು ಎನ್ನೋದನ್ನ ಸಾರಿದ್ದಾರೆ. ಸದ್ಯ ಊಟ ಪಡೆದುಕೊಂಡ ಬಡ ಕುಟುಂಬಗಳು ನಿರಾಳವಾಗಿದ್ದು, ಊರಿಗೆ ಹೋಗುವುದಕ್ಕೆ ಏನಾದರು ವ್ಯವಸ್ಥೆ ಮಾಡಿಕೊಟ್ಟರೆ ನಾವು ಊರಿಗೆ ಹೋಗಿಬಿಡುತ್ತೇವೆ ಎಂದು ಅಂಗಲಾಚಿದ್ದಾರೆ.