ಮಡಿಕೇರಿ: ಹುಲಿ ಬಂತು ಹುಲಿ ಕಥೆಯನ್ನ ಬಹುತೇಕರು ಕೇಳಿದ್ದೇವೆ. ಸದ್ಯ ಮಡಿಕೇರಿಯ ಸುತ್ತಮುತ್ತಲೂ ಇಂತದ್ದೇ ಒಂದು ಕಥೆ ಸುತ್ತುತ್ತಿದೆ. ಆ ಒಂದು ಫೋಟೋ ಜನರಲ್ಲಿ ಇನ್ನಿಲ್ಲದ ಭಯವನ್ನ ಹುಟ್ಟಿಸುತ್ತಿದೆ. ದಟ್ಟಕಾನನದ ನಡುವೆ ವ್ಯಕ್ತಿಯನ್ನ ತಿಂದಿರೋ ವ್ಯಾಘ್ರ…! ರುಂಡವನ್ನ ಕಳಚಿಕೊಂಡು ಬೇರೆಯಾಗಿ ಬಿದ್ದಿರೋ ವ್ಯಕ್ತಿಯ ಮುಂಡ..! ವ್ಯಕ್ತಿಯನ್ನ ಭೀಕರವಾಗಿ ತಿಂದು ರಸ್ತೆ ದಾಟುತ್ತಿರೋ ಹುಲಿರಾಯ..!! ಅಬ್ಬಾ.. ಇಂತಹದೊಂದು ಫೋಟೋ ಮಡಿಕೇರಿ ಪರಿಸರದಲ್ಲಿ ಹರಿದಾಡುತ್ತಿದೆ.
ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಹೆಬ್ಬೆಟ್ಟಗೇರಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ ಎಂಬ ವಿಚಾರ ಜನರನ್ನ ಅಕ್ಷರಶಃ ಕಂಗೆಡಿಸಿದೆ. ಆದರೆ ಇದು ಇಲ್ಲಿ ನಡೆದಿಲ್ಲ ಅನ್ನೋದು ಎಲ್ಲರ ಮಾತು. ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಫೋಟೋ ಜನರನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಡುತ್ತಿರೋ ಈ ಸಂದೇಶ, ಸದ್ಯ ಅರಣ್ಯ ಇಲಾಖೆಯನ್ನ ಹೈರಾಣಾಗುವಂತೆ ಮಾಡಿದೆ. ಈ ರೀತಿಯ ಯಾವುದೇ ಘಟನೆ ಮಡಿಕೇರಿ ಭಾಗದಲ್ಲಿ ಆಗಿಲ್ಲ ಅಂತಾ ಅರಣ್ಯ ಇಲಾಖೆ ಪ್ರಕಟಣೆಯನ್ನೇ ಹೊರಡಿಸಿದೆ.
ಅಂದಾಗೆ ಜನರು ಈ ಪರಿ ಹೆದರಿಕೊಳ್ಳೋಕೆ ಕಾರಣ, ವಿರಾಜಪೇಟೆ ಭಾಗದಲ್ಲಿ ಮತ್ತೆ ಹುಲಿ ಕಾಣಿಸಿಕೊಳ್ತಿರೋದು. ಸುಮಾರು 40ಕ್ಕೂ ಹೆಚ್ಚು ಜಾನುವಾರುಗಳನ್ನ ತಿಂದು ಹಾಕಿದ ವ್ಯಾಘ್ರ, ಕಳೆದ ಎರಡ್ಮೂರು ತಿಂಗಳಿನಿಂದ ಈ ಭಾಗದಲ್ಲಿ ಸೈಲೆಂಟಾಗಿತ್ತು. ಆದರೆ ಇದೀಗ ಮತ್ತೆ ತನ್ನ ಅಟ್ಟಹಾಸವನ್ನ ಮುಂದುವರೆಸಿದ್ದು, ಕಳೆದೊಂದು ವಾರದಲ್ಲೇ ನಾಲ್ಕು ಜಾನುವಾರುಗಳನ್ನ ತಿಂದು ಹಾಕಿದೆ.
ಅರಣ್ಯ ಇಲಾಖೆ ಎಷ್ಟೇ ಇಲ್ಲ ಎಂದರೂ ಸ್ವಾಹ ಮಾಡಿಕೊಂಡು ಓಡಾಡುತ್ತಿರೋ ಹುಲಿ ಬಗ್ಗೆಯೂ ಜನರು ಭಯಪಡುವಂತಾಗಿದೆ. ಆದರೂ ಕೂಡ ಮಿಂಚಿನ ವೇಗದಲ್ಲಿ ಒಬ್ಬರಿಂದ ಇನ್ನೊಬ್ಬರ ಮೊಬೈಲ್ ಗೆ ಹುಲಿ ಬಂತು ಹುಲಿ ಮೆಸೇಜ್ ಫಾರ್ವರ್ಡ್ ಆಗ್ತಿರೋದ್ರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv