– ಮಾಜಿ ಸಿಎಂ ಎಚ್ಡಿಕೆ, ಸಿದ್ದರಾಮಯ್ಯನವರಿಗೂ ನಿಯಮ ಅನ್ವಯ
ಮಡಿಕೇರಿ: ಗ್ರಾಹಕರು ಅನ್ನ ಚೆಲ್ಲದಂತೆ ಕೊಡಗಿನ ಪ್ರತಿಷ್ಠಿತ ರೆಸಾರ್ಟ್ ನಿಯಮ ರೂಪಿಸಿದ್ದು, ಭಾರೀ ಮೊತ್ತದ ದಂಡವನ್ನು ವಿಧಿಸುತ್ತಿದೆ.
ಮಡಿಕೇರಿ ಹೊರವಲಯದಲ್ಲಿರುವ ‘ಇಬ್ಬನಿ’ ರೆಸಾರ್ಟ್ ಈ ನಿಯಮ ಅಳವಡಿಸಿಕೊಂಡಡಿದೆ. ಗ್ರಾಹಕರು ಮತ್ತು ತನ್ನ ಸಿಬ್ಬಂದಿಗೆ ಈ ನಿಯಮ ಕಡ್ಡಾಯಗೊಳಿಸಿದೆ. ಹತ್ತು ಗ್ರಾಂ. ಆಹಾರ ಚೆಲ್ಲಿದರೆ ಅದರ ಹತ್ತುಪಟ್ಟು ಅಂದರೆ ನೂರು ರೂಪಾಯಿ ದಂಡ ವಿಧಿಸುತ್ತದೆ. ಈ ನಿಯಮ ಪಾಲಿಸುವ ಗ್ರಾಹಕರು ಮಾತ್ರ ಇಲ್ಲಿ ರೂಮ್ ಬುಕ್ ಮಾಡಿಕೊಳ್ಳಬಹುದು. ಇದನ್ನು ಪಾಲಿಸದಿದ್ದಲ್ಲಿ ರೂಮ್ ಕೊಡುವುದಿಲ್ಲ. ಗ್ರಾಹಕರು ಎಷ್ಟು ಬೇಕೋ ಅಷ್ಟು ಆಹಾರ ಹಾಕಿಕೊಂಡು ತಿನ್ನಬಹುದು. ಯಾವುದೇ ತಕರಾರು ಇಲ್ಲ. ಆದರೆ ತಿನ್ನುತ್ತೇವೆ ಎಂದು ಪ್ಲೇಟಿಗೆ ಹಾಕಿಕೊಂಡು ತಿನ್ನದೇ ಬಿಸಾಡುವಂತಿಲ್ಲ. ಹೀಗೆ ಮಾಡಿದಲ್ಲಿ ದಂಡ ಬೀಳುವುದು ಖಚಿತ.
ಒಂದು ವೇಳೆ ಬಿಸಾಡಿದರೆ ಅಲ್ಲೇ ಇರುವ ರೆಸಾರ್ಟ್ ಸಿಬ್ಬಂದಿ ತಕ್ಷಣವೇ ಅದನ್ನು ಸಂಗ್ರಹಿಸಿಕೊಂಡು ತೂಕ ಮಾಡುತ್ತಾರೆ. ನೀವು ಎಷ್ಟು ಆಹಾರ ಚೆಲ್ಲುತ್ತೀರೋ ಅದರ ಹತ್ತುಪಟ್ಟು ದಂಡವನ್ನು ಕಟ್ಟಿಸಿಕೊಳ್ಳುತ್ತಾರೆ. ಆದರೆ ದಂಡವನ್ನು ಮಾತ್ರ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಸಂಗ್ರಹವಾದ ದಂಡದ ದುಡ್ಡನ್ನು ಫೀಡ್ ಎ ಚೈಲ್ಡ್ ಹೆಸರಿನಲ್ಲಿ ಬೀಗ ಹಾಕಿದ ಒಂದು ಬಾಕ್ಸ್ ಇರಿಸಿದೆ.
ಆಹಾರ ಬಿಸಾಡಿದವರು ಆ ಬಾಕ್ಸ್ಗೆ ಹತ್ತು ಗ್ರಾಂ. ಆಹಾರಕ್ಕೆ ನೂರು ರೂಪಾಯಿಯಂತೆ ಎಷ್ಟು ಆಹಾರ ಎಸೆಯುತ್ತಾರೋ ಅಷ್ಟು ಹಣವನ್ನು ಹಾಕಲೇಬೇಕು. ದಂಡದ ರೂಪದಲ್ಲಿ ಒಂದು ವರ್ಷಗಳ ಕಾಲ ಸಂಗ್ರಹವಾದ ಹಣವನ್ನು ಅನಾಥಾಶ್ರಮಗಳಲ್ಲಿ ವಾಸವಿರುವ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಕೊಡಿಸಲು ಉಪಯೋಗಿಸಲಾಗುತ್ತದೆ. ಇನ್ನೂ ವೇಸ್ಟ್ ಎಂದು ಸಂಗ್ರಹಿಸಲಾದ ಆಹಾರವನ್ನು ರೆಸಾರ್ಟ್ ಆವರಣದಲ್ಲಿ ಸಿಗುವ ಎಲೆಯೊಂದಿಗೆ ಕರಗಿಸಿ ಗೊಬ್ಬರವಾಗಿ ಪರಿವರ್ತಿಸುತ್ತದೆ.
ಈ ಗೊಬ್ಬರದಿಂದಲೇ ಮತ್ತೆ ತರಕಾರಿ ಸೊಪ್ಪುಗಳನ್ನು ಬೆಳೆಯುತ್ತಿದೆ. ಇಲ್ಲಿ ಬೆಳೆಯುವ ಸೊಪ್ಪು ತರಕಾರಿಗಳಿಗೆ ಈ ಗೊಬ್ಬರ ಹೊರತ್ತುಪಡಿಸಿ ಮತ್ತಾವುದೇ ರಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದಿಲ್ಲ. ಈ ಹಿಂದೆ ರೆಸಾರ್ಟ್ಗೆ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೂ ಭೇಟಿ ನೀಡಿ ವಾಸ್ತವ್ಯ ಹೂಡಿದ್ದಾರೆ. ಇವರೆಲ್ಲರಿಗೂ ಇದೇ ನಿಯಮ ಅನ್ವಯಿಸಿದೆ.