ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಮನೆಯ ಬೀಗ ಮುರಿದು ಕಳವು ಮಾಡಿದ್ದ ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸತೀಶ್ (32), ಕಿರಣ್ (23) ಚಂದ್ರಶೇಖರ್.ಕೆ (23) ಎಂದು ಗುರುತಿಸಲಾಗಿದೆ. ಬಂಧಿತರಿಂದ 3,64,800 ರೂ. ಮೌಲ್ಯದ 96 ಗ್ರಾಂ ಚಿನ್ನಾಭರಣ, 128 ಗ್ರಾಂ ತೂಕದ ಬೆಳ್ಳಿ, 1 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಸ್ಪ್ಲೆಂಡರ್ ಬೈಕ್ ಹಾಗೂ ಮನೆ ಬೀಗ ಒಡೆಯಲು ಬಳಸಿದ್ದ 2 ಕಬ್ಬಿಣದ ರಾಡ್ನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮೂರು ತಿಂಗಳ ಹಿಂದೆ ಬಿಳಿಗೇರಿ ಗ್ರಾಮದಲ್ಲಿ ಕೆಲಸದ ಸಲುವಾಗಿ ಮನೆಗೆ ಬೀಗ ಹಾಕಿ ತೆರಳಿದ್ದವರ ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿದ್ದರು. ಈ ಸಂಬಂಧ 2 ಪ್ರಕರಣಗಳು ದಾಖಲಾಗಿದ್ದವು. ಸದರಿ ಪ್ರಕರಣವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಸೋಮವಾರಪೇಟೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು.
ಈ ವಿಶೇಷ ತಂಡ ಸೋಮವಾರಪೇಟೆ ಪೊಲೀಸ್ ಅಧೀಕ್ಷಕರು ಹಾಗೂ ಉಪಾಧೀಕ್ಷಕರ ಸೂಚನೆ ಮೆರೆಗೆ ಕಾರ್ಯಪ್ರವೃತ್ತರಾಗಿ ಮೊಬೈಲ್ ಟ್ರ್ಯಾಕ್ ಮಾಡುವ ಮೂಲಕ ಆರೋಪಿಗಳನ್ನು ಬಿಳಿಗೇರಿ ಹಾಗೂ ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ.