– ಸಿಸಿಟಿವಿಯಲ್ಲಿ ವಿಡಿಯೋ ಸೆರೆ
ಮಡಿಕೇರಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ರವೀಂದ್ರ ಎಂಬವರ ಮನೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿ ದುಷ್ಕರ್ಮಿಗಳು ಕಾಲ್ಕಿತ್ತಿರುವ ಘಟನೆ ಮಡಿಕೇರಿ ನಗರದ ಪುಟಾಣಿ ನಗರದಲ್ಲಿ ರಾತ್ರಿ ನಡೆದಿದೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ರವೀಂದ್ರರ ಮಗ ಕೀರ್ತನ್ ಸ್ನೇಹಿತರಾದ ಯಶವಂತ್ ಎಂಬಾತನನ್ನು ಮಡಿಕೇರಿ ನಗರ ಪೋಲಿಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಇಬ್ಬರು ರವೀಂದ್ರ ಅವರ ಮನೆಗೆ ಕಲ್ಲುಗಳನ್ನು ತೂರಿ ಸ್ಥಳದಿಂದ ಓಡಿದ್ದಾರೆ. ರೂಮ್ನಲ್ಲಿ ಮಲಗಿದ್ದ ರವೀಂದ್ರರ ಮಗ ಕೀರ್ತನ್ ಮೇಲೆ ಗಾಜುಗಳು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ವ್ಯಾನ್ ಚಾಲಕ ವೃತ್ತಿ ನಿರ್ವಹಿಸುತ್ತಿರುವ ರವೀಂದ್ರ ಅವರ ಮಗ ಕೀರ್ತನ್ ಮೇಲೆ ಸ್ನೇಹಿತರು ಸಾಕಷ್ಟು ಬಾರಿ ಹಲ್ಲೆ ನಡೆಸಿದ್ದರು ಎನ್ನುವ ಆರೋಪಗಳು ಕೇಳಿ ಬಂದಿವೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.