ಮಡಿಕೇರಿ: ಅಕ್ರಮ ಮದ್ಯ ಮಾರಾಟ ಪರಿಶೀಲನೆ ಮಾಡಲು ಹೋಗಿದ್ದ ಅಬಕಾರಿ ಪೊಲೀಸರು ಅಶ್ಲೀಲ ಪದಗಳಿಂದ ಒಬ್ಬರನೊಬ್ಬರು ನಿಂದಿಸಿ, ನಡು ಬೀದಿಯಲ್ಲೇ ಬಡಿದಾಡಿಕೊಂಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಅಬಕಾರಿ ಇನ್ಸ್ ಪೆಕ್ಟರ್ ನಟರಾಜ್ ಮತ್ತು ಉಪ ಅಧೀಕ್ಷಕ ಶಿವಪ್ಪ ನಡುಬೀದಿಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಲಾಕ್ಡೌನ್ ಆಗಿರುವುದರಿಂದ ಎಲ್ಲಿಯೂ ಮದ್ಯ ಮಾರುವಂತಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರು ಕಳ್ಳಬಟ್ಟಿ, ಅಕ್ರಮ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಉಪ ಅಧೀಕ್ಷಕ ಶಿವಪ್ಪ ಮತ್ತು ತಂಡ ಪರಿಶೀಲನೆಗೆ ಹೋಗಿತ್ತು.
ಈ ವೇಳೆ ಸ್ಥಳಕ್ಕೆ ಬಂದ ಅಬಕಾರಿ ಇನ್ಸ್ ಪೆಕ್ಟರ್ ನಟರಾಜ್ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಇಬ್ಬರೂ ಕೈ ಕೈ ಮಿಲಾಸಿ ಹಾದಿ ರಂಪ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಎನ್ನುವುದನ್ನೂ ಮರೆತು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.