ಮಡಿಕೇರಿ: ಜಗತ್ ಪ್ರಸಿದ್ಧ ಮೈಸೂರು ದಸರಾಕ್ಕೆ ಇಂದು ಬೆಳಗ್ಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಇತ್ತ ಐತಿಹಾಸಿಕ ಮಡಿಕೇರಿ ದಸರಾಕ್ಕೂ ಇಂದು ಚಾಲನೆ ನೀಡಲಾಗಿದೆ. 147 ವರ್ಷಗಳ ಇತಿಹಾಸ ಹೊಂದಿರುವ ಮಂಜಿನ ನಗರಿ ಮಡಿಕೇರಿ ದಸರಾ ಇಂದು ನಗರದ ನಾಲ್ಕು ಶಕ್ತಿದೇವತೆಗಳ ಕರಗಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆತಿದೆ.
ನಗರದ ಪಂಪಿನ ಕೆರೆಬಳಿಯಲ್ಲಿ ನಾಲ್ಕು ಕರಗಗಳಿಗೆ ಸಾಂಪ್ರದಾಯಿಕ ಪೂಜೆಸಲ್ಲಿಸುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವೀರಾಜಪೇಟೆ ಶಾಸಕ ಕೆ.ಜಿ.ಬೋಪ್ಪಯ್ಯ, ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಇಂದು ಕರಗ ಹೊರುವ ಮೂಲಕ ದಸರಾ ಪ್ರಾರಂಭಗೊಂಡಿದ್ದು, ನಾಳೆಯಿಂದ ಒಂದು ವಾರಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ಜನರ ಮನವನ್ನು ತಣಿಸಲಿವೆ. ದಸರಾ ಪ್ರಯುಕ್ತ ಮಂಜಿನ ನಗರಿ ನವವಧುವಿನಂತೆ ಸಿಂಗಾರಗೊಂಡಿದ್ದು, ಇಡೀ ನಗರವೇ ಕಂಗೊಳಿಸುತ್ತಿದೆ.
ಇಂದು ಸಂಜೆ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಮಿತಿ ಸದಸ್ಯರು ದಸರಾ ಯಶಸ್ಸಿಗೆ ದೇವರಲ್ಲಿ ಮೊರೆಯಿಟ್ಟಿದ್ದಾರೆ. ನಗರದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ ದೇವಾಲಯಗಳ ಕರಗಗಳನ್ನು ಹೊತ್ತ ವೃತಧಾರಿಗಳು ನವರಾತ್ರಿಯ ಒಂಭತ್ತು ದಿನಗಳ ಕಾಲ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.
ಶತಮಾನಗಳ ಹಿಂದೆ ಬರಗಾಲದಿಂದ ಮಡಿಕೇರಿಯಲ್ಲಿ ಭೀಕರ ಕಾಲರಾ ಆವರಿಸಿದ್ದ ಸಂದರ್ಭದಲ್ಲಿ ದೇವತೆಗಳನ್ನು ಕರಗದ ಮೂಲಕ ನಗರ ಪ್ರದಕ್ಷಿಣೆ ಮಾಡಿ ಪೂಜೆಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಕರಗ ಉತ್ಸವ ನಡೆಸಲಾಗುತ್ತದೆ. ಮಡಿಕೇರಿಯ ಶಕ್ತಿದೇವತೆಗಳೆಂದೇ ಕರೆಸಿಕೊಳ್ಳುವ ನಾಲ್ಕೂ ದೇವಿಯರನ್ನು ಜನತೆ ಆರಾಧಿಸುತ್ತಾರೆ. ಕೊನೆಯ ದಿನ ಮಡಿಕೇರಿ ದಸರಾದ ವಿಶೇಷ ದಶಮಂಟಪಗಳ ಉತ್ಸವ ಎಲ್ಲರನ್ನು ಬೆರಗುಗೊಳಿಸಲಿದೆ.