ಮಡಿಕೇರಿ: ಲಾಕ್ಡೌನ್ ನಿಯಮ ಉಲ್ಲಂಘಿಸಿ ಚೆಕ್ಪೋಸ್ಟ್ ದಾಟಲು ಯತ್ನಿಸಿದ ಮೂವರನ್ನು ಕ್ವಾರಂಟೈನ್ನಲ್ಲಿ ಇರಿಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಟ್ಟ ಹಳೆ ಚೆಕ್ಪೋಸ್ಟ್ ಬಳಿ ನಡೆದಿದೆ.
ಕುಟ್ಟ ಹಳೆ ಚೆಕ್ಪೋಸ್ಟ್ ದಾಟಲು ಯತ್ನಿಸಿದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ನಿಯಮ ಉಲ್ಲಂಘಿಸಿ ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಕಾರ್ಮಿಕರನ್ನು ಕಳುಹಿಸಲು ಯತ್ನಿಸುತ್ತಿದ್ದ ಕೆ.ಬಾಡಗ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸಿ.ಡಿ ಬೋಪಣ್ಣ, ಕೇರಳ ಮೂಲದ ಕಾರ್ಮಿಕರಾದ ಮಟ್ಟನೈಲ್ ಅನೂಪ್ ಹಾಗೂ ಸತ್ಯ ಅವರನ್ನು ವಶಕ್ಕೆ ಪಡೆದು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗಿನಲ್ಲಿ ಒಂದು ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿತ್ತು, ಆದರೆ ಸೋಂಕಿತ ಚಿಕಿತ್ಸೆ ಪಡೆದು ಕೊರೊನಾದಿಂದ ಗುಣವಾಗಿದ್ದಾರೆ. ಹೀಗಾಗಿ ಸದ್ಯ ಕೊಡಗಿನಲ್ಲಿ ಯಾವುದೇ ಸೋಂಕಿತ ಪ್ರಕರಣಗಳು ಇಲ್ಲದ ಹಿನ್ನೆಲೆ ಕೊರೊನಾ ಮುಕ್ತ ಜಿಲ್ಲೆಯಾಗಿದೆ.