ಮಡಿಕೇರಿ: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೆ, ಪ್ರಕೃತಿ ಮಾತೆ ಮಾತ್ರ ಸಂತಸ ಪಡುತ್ತಿದ್ದಾಳೆ.
ಮಹಾಮಾರಿಯಿಂದ ಜನರನ್ನು ರಕ್ಷಿಸಲು ಪ್ರಧಾನಿ ಮೋದಿ ಅವರು ದೇಶವನ್ನೇ ಲಾಕ್ಡೌನ್ ಮಾಡಿರುವುದರಿಂದ ದೇಶದಲ್ಲಿ ನಿತ್ಯ ಓಡಾಡುತ್ತಿದ್ದ ಕೋಟ್ಯಂತರ ವಾಹನಗಳ ಸದ್ದಿಲ್ಲ. ಕಾರ್ಖಾನೆಗಳ ಹೊಗೆ ತ್ಯಾಜ್ಯವೂ ಇಲ್ಲ. ಹೀಗಾಗಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಮತ್ತು ಶಬ್ಧ ಮಾಲಿನ್ಯಗಳಿಗೆ ಬ್ರೇಕ್ ಬಿದ್ದಿದೆ.
ಮತ್ತೊಂದೆಡೆ ಜನರ ಓಡಾಟವೂ ಇಲ್ಲದಿರುವುದರಿಂದ ಕೊಡಗಿನಲ್ಲಿ ಹುಟ್ಟಿ ನಾಡಿನುದ್ಧಕ್ಕೂ ಹರಿಯುತ್ತಿರುವ ಕನ್ನಡನಾಡಿನ ಜೀವನದಿ ಕಾವೇರಿ ತನ್ನಿಂದ ತಾನೇ ಸ್ವಚ್ಛವಾಗಿದ್ದಾಳೆ. ಬೇಸಿಗೆಯಲ್ಲಂತೂ ಕೊಡಗಿನಲ್ಲೇ ಕಾವೇರಿ ನದಿ ನೀರು ಸಿ ಕೆಟಗರಿಯಲ್ಲಿ ಇರುತ್ತಿತ್ತು. ಆದರೆ ಲಾಕ್ಡೌನ್ನಿಂದ ಈಗ ಬಿ ಕೆಟಗರಿಯಲ್ಲಿ ಹರಿಯುತ್ತಿದೆ.
ಸಾಕಷ್ಟು ಹೊಟೇಲ್, ರೆಸಾರ್ಟ್ಗಳಲ್ಲಿ ಬರುತ್ತಿದ್ದ ಎಲ್ಲಾ ರೀತಿಯ ತ್ಯಾಜ್ಯಗಳು ಕಾವೇರಿ ನದಿಗೆ ಸೇರುತ್ತಿತ್ತು. ಆದರೆ ಈಗ ಲಾಕ್ಡೌನ್ನಿಂದಾಗಿ ಎಲ್ಲ ರೆಸಾರ್ಟ್ ಹೊಟೇಲ್ಗಳು ಬಂದ್ ಆಗಿವೆ. ಹೀಗಾಗಿ ಕಾವೇರಿ ಸ್ವಚ್ಛವಾಗಿದ್ದಾಳೆ. ಈಗ ಕಾವೇರಿ ನದಿಯ ನೀರು ಕೊಡಗಿನಲ್ಲಿ ಬಿ ಕೆಟಗರಿಯಲ್ಲಿ ಹರಿಯುತ್ತಿರುವುದು ಜನತೆಯ ಸಂತಸಕ್ಕೆ ಕಾರಣವಾಗಿದೆ.