ಭೋಪಾಲ್: ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ರಾಮನ ಆಗಮನಕ್ಕಾಗಿ ಕಾದಿದ್ದ ಶಬರಿಯ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಧ್ಯ ಪ್ರದೇಶದಲ್ಲೊಬ್ಬರು ಆಧುನಿಕ ಶಬರಿ ಇದ್ದಾರೆ. ಅವರು ರಾಮನ ಬದಲಿಗೆ ಅಯೋಧ್ಯೆ ಜಮೀನು ವಿವಾದ ಪರಿಹಾರವಾಗಿ ತೀರ್ಪು ಹೊರಬರಲಿ ಎಂದು ಬರೋಬ್ಬರಿ 27 ವರ್ಷದಿಂದ ಅನ್ನ ಬಿಟ್ಟು ಉಪವಾಸ ಮಾಡಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರದ ಊರ್ಮಿಳಾ ಚರ್ತುವೇದಿ(81) ರಾಮ ಜನ್ಮಭೂಮಿ ವಿವಾದ ಬಗೆಹರಿಯಲೆಂದು ಉಪವಾಸ ಮಾಡಿದ್ದಾರೆ. ಊರ್ಮಿಳಾ ಅವರು ಸಂಸ್ಕೃತ ಭಾಷಾ ಶಿಕ್ಷಕಿಯಾಗಿದ್ದು, ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ 1992ರಿಂದ ಅನ್ನ ಆಹಾರ ತ್ಯಜಿಸಿ ಉಪವಾಸ ಮಾಡಿಕೊಂಡು ಬಂದಿದ್ದಾರೆ. ಜಮೀನು ವಿವಾದ ಇತ್ಯರ್ಥವಾಗುವ ತನಕ ಅಂದರೆ 27 ವರ್ಷ ಕಾಲ ಬರೀ ಹಣ್ಣು ಮತ್ತು ಹಾಲು ಕುಡಿದು ಊರ್ಮಿಳಾ ಬದುಕಿದ್ದಾರೆ. ಶಬರಿ ರಾಮನಿಗಾಗಿ ಕಾದಂತೆ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ ಕಾದು ಭಕ್ತಿ ಮೆರೆದಿದ್ದಾರೆ. ಇದನ್ನೂ ಓದಿ:ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ
ಈ ಬಗ್ಗೆ ಊರ್ಮಿಳಾ ಮಗ ಅಮಿತ್ ಚರ್ತುವೇದಿ ಮಾತನಾಡಿ, ಶನಿವಾರ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಅಯೋಧ್ಯೆ ತೀರ್ಪು ಹೊರಡಿಸಿರುವುದನ್ನು ಕೇಳಿ ಅಮ್ಮ ಖುಷಿಪಟ್ಟಿದ್ದಾರೆ. 27 ವರ್ಷದಿಂದ ಊಟ ಬಿಟ್ಟಿದ್ದ ಅವರು ಈಗ ಊಟ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ:ರಾಮ ಮಂದಿರ ನಿರ್ಮಾಣಕ್ಕೆ 5 ವರ್ಷ ಬೇಕು
ಅಮ್ಮ ಶ್ರೀರಾಮನ ದೊಡ್ಡ ಭಕ್ತೆ, ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ ಎರಡು ದಶಕಗಳಿಂದ ಅವರು ಕಾಯುತ್ತಿದ್ದರು. ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಸಂಸ್ಕೃತ ಭಾಷಾ ಶಿಕ್ಷಕಿಯಾಗಿ ಅಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಂಡು ದೇಶದಾದ್ಯಂತ ಹಿಂಸಾಚಾರ ನಡೆದಾಗ ಅವರು ಬಹಳ ಖಿನ್ನತೆಗೊಳಗಾಗಿದ್ದರು. ತಮ್ಮ 54ನೇ ವಯಸ್ಸಿನಲ್ಲಿ ಅವರು ಉಪವಾಸ ಮಾಡಲು ಆರಂಭಿಸಿದರು. ಅನ್ನ ಸೇವಿಸುವುದನ್ನು ಬಿಟ್ಟು ಕೇವಲ ಹಣ್ಣು ಮತ್ತು ಹಾಲನ್ನು ಮಾತ್ರ ಸೇವನೆ ಮಾಡಿಕೊಂಡು ಬಂದಿದ್ದಾರೆ. ಸಂಬಂಧಿಕರು ಹಲವು ಬಾರಿ ಊಟ ಮಾಡುವಂತೆ ಮನವಿ ಮಾಡಿದರೂ ಅಮ್ಮ ಮಾತ್ರ ತಮ್ಮ ನಿರ್ಧಾರವನ್ನು ಕೈಬಿಡಲಿಲ್ಲ ಎಂದು ಅಮಿತ್ ತಿಳಿಸಿದರು. ಇದನ್ನೂ ಓದಿ:ಅಯೋಧ್ಯೆ ಕೇಸ್ – 92 ವರ್ಷದ ‘ತರುಣ’ ವಕೀಲನ ಸಾಧನೆಗೆ ಪ್ರಶಂಸೆಯ ಸುರಿಮಳೆ
ಅಯೋಧ್ಯೆ ಜಮೀನು ವಿವಾದ ತೀರ್ಮಾನವಾಗಿ ಅಮ್ಮನ ಆಸೆ ನೆರವೇರಿದೆ. ಶೀಘ್ರದಲ್ಲೇ ನಮ್ಮ ಕುಟುಂಬ ಅಮ್ಮನ ಉಪವಾಸ ಕೈಬಿಡುವ `ಉದ್ಯಾಪನ್’ ಕಾರ್ಯಕ್ರಮವನ್ನು ಆಯೋಜಿಸಲಿದೆ. ಹಾಗೆಯೇ ನನ್ನ ಅಮ್ಮ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅಮಿತ್ ಮಾಹಿತಿ ನೀಡಿದರು.