ನವದೆಹಲಿ: ಮಧ್ಯಪ್ರದೇಶದಲ್ಲಿ (Madhya Pradesh) ಬಿಜೆಪಿ ಸುನಾಮಿಗೆ (BJP Tsunami) ಕಾಂಗ್ರೆಸ್ ಕೊಚ್ಚಿ ಹೋಗಿದೆ. ಆಡಳಿತ ವಿರೋಧಿ ಅಲೆಯಿಂದ ಬಿಜೆಪಿ ಸೋಲಬಹುದು ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್ (Congress) ಲೆಕ್ಕಾಚಾರ ಉಲ್ಟಾ ಆಗಿದೆ.
ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಸರ್ಕಾರಕ್ಕೆ ಈ ಬಾರಿ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಮಧ್ಯಪ್ರದೇಶದಲ್ಲಿ ಚೌಹಾಣ್ ಅವರಿಗೆ ʼಮಾಮಾಜಿʼ ಎಂದು ಕರೆಯುತ್ತಾರೆ. ಈ ಚುನಾವಣೆಯಲ್ಲಿ ಮಾಮಾಜಿ ಮ್ಯಾಜಿಕ್ ಕೆಲಸ ಮಾಡಿದ್ದು ಬಿಜೆಪಿ ಭರ್ಜರಿ ಜಯ ಸಾಧಿಸಿದೆ.
ಮಧ್ಯಾಹ್ನ 1 ಗಂಟೆಯ ಟ್ರೆಂಡ್ ಪ್ರಕಾರ ಬಿಜೆಪಿ 168, ಕಾಂಗ್ರೆಸ್ 58, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ – #ModiKiGuarantee ಫುಲ್ ಟ್ರೆಂಡ್
ಬಿಜೆಪಿ ಗೆದ್ದಿದ್ದು ಹೇಗೆ?
ಬಿಜೆಪಿ ವ್ಯವಸ್ಥಿತವಾಗಿ ಟಿಕೆಟ್ ಹಂಚಿಕೆ ಮಾಡಿತ್ತು. 7 ಸಂಸದರು, 3 ಕೇಂದ್ರ ಸಚಿವರು, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯನ್ನೇ ಚುನಾವಣಾ ಕಣಕ್ಕೆ ಇಳಿಸಿತ್ತು.
ಗೆಲ್ಲುವ ಮಾನದಂಡದಲ್ಲಿ ವಯಸ್ಸು, ಕುಟುಂಬ ರಾಜಕೀಯ ಮುಂತಾದ ವಿಚಾರಗಳನ್ನು ಬದಿಗಿಟ್ಟು 70 ವರ್ಷ ಮೀರಿದ 14 ಅಭ್ಯರ್ಥಿಗಳಿಗೆ, 80 ವರ್ಷ ಮೀರಿದ ಮೀರಿದ ಒಬ್ಬರಿಗೆ ಟಿಕೆಟ್ ಹಂಚಿಕೆ ಮಾಡಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಿದ ಪರಿಣಾಮ ಬಿಜೆಪಿ ಹೀನಾಯವಾಗಿ ಸೋತಿತ್ತು. ಆದ್ದರಿಂದ ಮಧ್ಯಪ್ರದೇಶದಲ್ಲಿ ಆ ತಪ್ಪು ಮಾಡದೇ ವಯಸ್ಸನ್ನು ನೋಡದೇ ಹಿರಿಯರಿಗೆ ಬಿಜೆಪಿ ಮಣೆ ಹಾಕಿತ್ತು.
ಗ್ಯಾರಂಟಿಗೆ ಠಕ್ಕರ್ ಕೊಡಲು ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ. ಪಿಯುಸಿವರೆಗೆ ಎಲ್ಲ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿತ್ತು.
ಲಾಡ್ಲಿ ಬೆಹನಾ ಯೋಜನೆಯ ಅಡಿ ಮಹಿಳೆಯರಿಗೆ ಪ್ರತಿ ತಿಂಗಳು 1250 ರೂ. ನೀಡುವ ಯೋಜನೆಯನ್ನು ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದರು. ಅಷ್ಟೇ ಅಲ್ಲದೇ ಖಾತೆಗೆ ಹಣ ಸಹ ಬಿದ್ದಿತ್ತು. ಪಿಎಂ ಉಜ್ವಲಾ ಯೋಜನೆ ಅಡಿ ಸಿಲಿಂಡರ್ಗೆ 450 ರೂ. ನೀಡುವುದಾಗಿ ಭರವಸೆ ನೀಡಿತ್ತು.
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್, ಫಗ್ಗನ್ ಸಿಂಗ್ ಕುಲಸ್ತೆ, ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ ಅವರಿಗೆ ಟಿಕೆಟ್ ನೀಡುವ ಮೂಲಕ ಬದಲಿ ನಾಯಕತ್ವದ ಭರವಸೆ ಹುಟ್ಟಿಸಿತ್ತು.
ಕಾಂಗ್ರೆಸ್ ಸೋತಿದ್ದು ಹೇಗೆ?
ಮಧ್ಯಪ್ರದೇಶದಲ್ಲಿ ಮೊದಲೇ ಬಿಜೆಪಿ ಪ್ರಬಲವಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಬದಲಿ ನಾಯಕತ್ವದ ಸುಳಿವು ನೀಡಿತ್ತು. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಜನಪ್ರೀಯತೆ ಗುರುತಿಸುವಲ್ಲಿ ಕಾಂಗ್ರೆಸ್ ಮತ್ತೆ ವಿಫಲವಾಯಿತು. ಇದರ ಜೊತೆ 2019ರಲ್ಲಿ ಕಮಲ್ ನಾಥ್ ಜೊತೆ ಕಿತ್ತಾಟದಿಂದ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ನಿಂದ ಹೊರ ಬಂದಿದ್ದರು. ಇದು ಕಾಂಗ್ರೆಸ್ ದೊಡ್ಡ ಹೊಡೆತ ನೀಡಿತ್ತು.