ಬೆಂಗಳೂರು: ಮಧ್ಯಪ್ರದೇಶದ ಕೈ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಅಸ್ತ್ರ ಪ್ರಯೋಗಿಸಿದೆ. ರಾಜ್ಯ ಬಿಜೆಪಿಯ ಯಾರೊಬ್ಬರನ್ನ ಗಣನೆಗೆ ತೆಗೆದುಕೊಳ್ಳದೇ ಹೈಕಮಾಂಡ್ ಪ್ಲ್ಯಾನ್ ಅನುಷ್ಠಾನಕ್ಕೆ ತರುವ ಕೆಲಸಕ್ಕೆ ರಹಸ್ಯ ಸೂತ್ರ ಹೆಣೆದಿರುವುದು ಗೊತ್ತಾಗಿದೆ. ಅದೇ ಒನ್ ಟು ಒನ್ – ಒನ್ ಕನೆಕ್ಷನ್ ಆಪರೇಷನ್ ತಂತ್ರ.
ಅಂದಹಾಗೆ ಮಧ್ಯಪ್ರದೇಶದ ಕೈ ಶಾಸಕರು ಕರ್ನಾಟಕದಲ್ಲಿ ಸೇಫ್ ಎನ್ನುವ ವರದಿಯನ್ನು ಹೈಕಮಾಂಡ್ ತರಿಸಿಕೊಂಡಿತ್ತು. ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ಮಾತ್ರ ತಂದು ಶಾಸಕರನ್ನು ಶಿಫ್ಟ್ ಮಾಡುವ ಕೆಲಸ ಮಾಡಿತ್ತು. ಆ ಶಾಸಕರ ಕಾವಲಿಗೆ ನಾಯಕರನ್ನು ಗುಡ್ಡೆ ಹಾಕದೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನು ಮಾತ್ರ ನೇಮಿಸಿ ಉಳಿದವರಿಗೆ ಪ್ಲ್ಯಾನ್ ಗೊತ್ತಾಗದಂತೆ ರಹಸ್ಯ ಕಾಪಾಡಿಕೊಂಡು ಬಂದಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಅಥವಾ ಬೇರೆ ಯಾವುದೇ ನಾಯಕರಿಗಾಗಲೀ ಶಾಸಕರನ್ನ ಕಾವಲು ಕಾಯುವ ತಂತ್ರ ಗೊತ್ತಾಗದಂತೆ ರಹಸ್ಯ ಕಾಪಾಡಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ. ಪೊಲೀಸ್ ರಕ್ಷಣೆ ಕೊಡುವ ಕೆಲಸವನ್ನಷ್ಟೇ ಗೃಹ ಸಚಿವರು ಮಾಡಬೇಕು ಹೊರತು, ಶಾಸಕರ ಕಾಯುವ ತಂತ್ರದಲ್ಲಿ ಇರಬಾರದು ಎನ್ನುವುದು ಹೈಕಮಾಂಡ್ ಆದೇಶ ಎನ್ನಲಾಗಿದೆ.
ಮಧ್ಯಪ್ರದೇಶದ ಶಾಸಕರ ಬಳಿ ಕರ್ನಾಟಕದ ಯಾವುದೇ ಬಿಜೆಪಿ ನಾಯಕರಾಗಲಿ, ಯಡಿಯೂರಪ್ಪ ಕ್ಯಾಬಿನೆಟ್ ಸಚಿವರು ಭೇಟಿ ಆಗಬಾರದು ಅಂತಾ ಹೈಕಮಾಂಡ್ ಫರ್ಮಾನು ಹೊರಡಿಸಿದೆ ಎನ್ನಲಾಗಿದೆ. ಯಡಿಯೂರಪ್ಪ ಸಂಪುಟದ ಇಬ್ಬರು ಪಕ್ಷನಿಷ್ಠ ಸಚಿವರನ್ನು ಮಧ್ಯಪ್ರದೇಶದ ಶಾಸಕರ ಕಾವಲಿಗೆ ನೇಮಿಸಿ ಎಂಬ ರಾಷ್ಟ್ರೀಯ ನಾಯಕರ ಸಲಹೆ ಕೂಡ ಬಿಜೆಪಿ ಹೈಕಮಾಂಡ್ ತಿರಸ್ಕರಿಸಿದೆ ಎನ್ನಲಾಗುತ್ತಿದೆ.
ದೆಹಲಿಯಿಂದ ಬರುವ ಪ್ಲ್ಯಾನ್ ಅನ್ನು ಮಾತ್ರ ಅನುಷ್ಠಾನಕ್ಕೆ ತರುವ ಕೆಲಸವನ್ನ ಮಾತ್ರ ಅರವಿಂದ ಲಿಂಬಾವಳಿ ಮಾಡಬೇಕು ಎನ್ನುವ ಸಂದೇಶ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಆಪರೇಷನ್ ಕಮಲ ಎರಡು, ಮೂರು ಬಾರಿ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.