ಬೆಂಗಳೂರು: ಆಪರೇಷನ್ ‘ಕಮಲ’ ಮಾದರಿಯಲ್ಲೇ ಆಪರೇಷನ್ ಮಧ್ಯಪ್ರದೇಶ್ ಆರಂಭವಾಗಿದೆ. ಆಪರೇಷನ್ ಮಧ್ಯಪ್ರದೇಶಕ್ಕೆ ಕರ್ನಾಟಕವೇ ಹೆಡ್ ಆಫೀಸ್ ಆಗಿದೆ.
ಮಧ್ಯಪ್ರದೇಶದ ನಾಲ್ವರು ಕಾಂಗ್ರೆಸ್ ಶಾಸಕರನ್ನು ಮಂಗಳವಾರ ತಡರಾತ್ರಿ ರಾಜ್ಯಕ್ಕೆ ಕರೆತರಲಾಗಿದೆ. ರಾಜ್ಯದ ಡಿಸಿಎಂ ಒಬ್ಬರ ಕಣ್ಗಾವಲಿನಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಜೊತೆಗೆ ಆ ನಾಲ್ವರು ಶಾಸಕರನ್ನು ರಾಜ್ಯಕ್ಕೆ ಕರೆತಂದು ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಮಧ್ಯಪ್ರದೇಶದ ಶಾಸಕರನ್ನು ವಿಶೇಷ ವಿಮಾನದಲ್ಲಿ ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶದಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಅವರನ್ನು ನೇರವಾಗಿ ಚಿಕ್ಕಮಗಳೂರು ರೆಸಾರ್ಟಿಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ನ 10 ಶಾಸಕರು ಹಾಗೂ ಇಬ್ಬರು ಪಕ್ಷೇತರರು ಸೇರಿ ಒಟ್ಟು 12 ಶಾಸಕರು ಬಿಜೆಪಿ ನಾಯಕರಿಂದ ಆಪರೇಷನ್ಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ರಾಜ್ಯಕ್ಕೆ ಕರೆತಂದವರಲ್ಲಿ ಕಾಂಗ್ರೆಸ್ ಶಾಸಕರಾದ ಹರ್ದೀಪ್ ಸಿಂಗ್, ಏಂದಲ್ ಸಿಂಗ್ ಕಂಸಾನ, ಪಕ್ಷೇತರ ಶಾಸಕ ಸುರೇಂದ್ರ ಸಿಂಗ್ ಶೇರಾ ಸೇರಿದಂತೆ ನಾಲ್ವರು ಇದ್ದಾರೆ.