ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಹಲವು ಹಂತಗಳಲ್ಲಿ ಚುನಾವಣೆ ಎದುರಿಸಿದ್ದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ತೆಲಂಗಾಣ, ಮಿಜೋರಾಂ ಜನಾದೇಶ ಏನೆಂಬ ಕುತೂಹಲಕ್ಕೆ ಬೆಳಗ್ಗೆ 10 ಗಂಟೆವೊಳಗೆ ತೆರೆ ಬೀಳಲಿದೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶ. ಬಿಜೆಪಿ ಹಿಡಿತದಲ್ಲಿರುವ ಈ ರಾಜ್ಯ ಕೈ ಪಾಲಾಗುವ ಎಲ್ಲ ಮುನ್ಸೂಚನೆಗಳು ವ್ಯಕ್ತವಾಗಿವೆ. ಮಧ್ಯಪ್ರದೇಶದಲ್ಲಿ ಬಿಜೆಪಿ – ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಇದೆ. ಹಾಲಿ ಸಿಎಂ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಬುಧ್ನಿ ಕ್ಷೇತ್ರದಿಂದ ನಾಲ್ಕನೇ ಬಾರಿ ಸ್ಪರ್ಧಿಸಿದ್ದಾರೆ. ಚೌಹಾಣ್ ಪರವಾಗಿ ಪ್ರಧಾನಿ ಮೋದಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದು ಎಷ್ಟರ ಮಟ್ಟಿಗೆ ವರ್ಕೌಟ್ ಆಗಿದೆ ಅನ್ನೋದು ಇಂದು ತಿಳಿಯಲಿದೆ.
ಸತತ ಮೂರು ಬಾರಿ ಸಿಎಂ ಆಗಿರೋ ಚೌಹಾಣ್ 4ನೇ ಬಾರಿಗೆ ಅಧಿಕಾರಕ್ಕೇರುವ ಕನಸು ಕಾಣ್ತಿದ್ದಾರೆ. ಇನ್ನು ಕಾಂಗ್ರೆಸ್ನಿಂದ 9 ಬಾರಿ ಸಂಸದರಾಗಿರುವ ಕಮಲ್ನಾಥ್ ಚಿಂದ್ವಾರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಮತ್ತೊಬ್ಬ ನಾಯಕ ಜೋತಿರಾಧಿತ್ಯ ಸಿಂಧ್ಯಾ ಗುಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇವರಿಬ್ಬರೂ ಸಹ ಭಾರೀ ಜನಬೆಂಬಲ ಹೊಂದಿದ್ದು ಕಾಂಗ್ರೆಸ್ನಿಂದ ಸಿಎಂ ಆಕಾಂಕ್ಷಿಗಳಾಗಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 230 ಒಟ್ಟು ಸ್ಥಾನಗಳಿದ್ದು, 116 ಅಗತ್ಯ ಬಹುಮತ ಬೇಕಿದೆ. 2013ರ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ 165 ಸೀಟು ದೊರೆತಿದ್ದು, ಕಾಂಗ್ರೆಸ್- 58 ಹಾಗೂ 07 ಇತರೆ ಸ್ಥಾನ ಗಳಿಸಿತ್ತು. 2013ರಲ್ಲಿ ಬಿಜೆಪಿಗೆ 44.68%, ಕಾಂಗ್ರೆಸ್ ಗೆ 36.38%, ಬಿಎಸ್ಪಿಗೆ 06.29% ಹಾಗೂ ಇತರೆ 12.45% ಮತ ಗಳಿಸಿದ್ದವು.
ಮಧ್ಯಪ್ರದೇಶದಲ್ಲಿ ಯಾರಿಗೆ ಪ್ಲಸ್? ಯಾರಿಗೆ ಮೈನಸ್?
15 ವರ್ಷಗಳ ಆಡಳಿತ ನಡೆಸಿರೋ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಅವರ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿಯೇ ಹೆಚ್ಚಾಗಿದೆ. ಬೆಲೆ ಕುಸಿತ ವಿರುದ್ಧ ಪ್ರತಿಭಟನೆ ನಡೆಸಿದ್ದ ರೈತರ ವಿರುದ್ಧ ಗೋಲಿಬಾರ್ ಮಾಡಲಾಗಿತ್ತು. ಬೆಳೆಗಳ ಬೆಲೆ ಕುಸಿತದಿಂದ ರೈತಾಪಿ ವರ್ಗದಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಬಿಜೆಪಿ ಸರ್ಕಾರ ವಿರುದ್ಧ ಮೇಲ್ವರ್ಗ ಮತ್ತು ದಲಿತ ಸಮುದಾಯದ ಆಕ್ರೋಶ ಹೊರಬಿದ್ದಿತ್ತು. ಭಾರತ್ ಬಂದ್ ವೇಳೆ ಘರ್ಷಣೆಯಲ್ಲಿ ದಲಿತರ ಹತ್ಯೆಯಾಗಿತ್ತು. ವ್ಯಾಪಂ ಸೇರಿದಂತೆ ಹಲವು ಹಗರಣಗಳ ಆರೋಪ ಎದುರಿಸಿತ್ತು. ಕ್ಯಾಬಿನೆಟ್ನಲ್ಲಿ ಸ್ಥಾನ ಕೊಟ್ಟರೂ ಶಿವರಾಜ್ಸಿಂಗ್ ಚವ್ಹಾಣ್ ವಿರುದ್ಧ ಅತೃಪ್ತಿ ಹೊರಬಿದ್ದಿತ್ತು. ಶೇ.90ರಷ್ಟು ಮುಸ್ಲಿಮರು ಮತ ಹಾಕಿಲ್ಲ ಅಂದ್ರೆ ಕಾಂಗ್ರೆಸ್ಸಿಗೆ ಸೋಲು ಅನ್ನೋ ಕಾಂಗ್ರೆಸ್ ಮುಖಂಡ ಕಮಲ್ನಾಥ್ ವೀಡಿಯೋ ವೈರಲ್ ಆಗಿದ್ದು ಇದು ಕಾಂಗ್ರೆಸ್ ಗೆ ಮೈನಸ್ ಆಗಲಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ವರದಾನವೇನು…?
15 ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಶಿವರಾಜ್ ಸಿಂಗ್ ಚವ್ಹಾಣ್ ಸತತ ಮೂರು ಬಾರಿ ಸಿಎಂ ಆಗಿದ್ದಾರೆ. ಗೋ ಸಂಕರಕ್ಷಣೆಗಾಗಿ ಪ್ರತಿ ಹಳ್ಳಿಗಳಲ್ಲೂ ಗೋಶಾಲೆ ನಿರ್ಮಾಣ, ರಾಮವನ್ಗಮನ್ ಪಾದಯಾತ್ರೆ, ಸಿಎಂ ಯಾರಾಗಬೇಕೆಂಬ ಜನಾಭಿಪ್ರಾಯದಲ್ಲಿ ಶಿವರಾಜ್ ಸಿಂಗ್ ಚವ್ಹಾಣ್ ಮುಂಚೂಣಿಯಲ್ಲಿದ್ದರು.
2013ರ ಎಲೆಕ್ಷನ್ನಲ್ಲಿ ಏನಾಗಿತ್ತು?
2013ರಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನ ಪಡೆದಿದ್ದು ಗ್ರಾಮೀಣ ಭಾಗದಿಂದ 165 ಸ್ಥಾನಗಳಲ್ಲಿ 125 ಸ್ಥಾನಗಳು ಬಿಜೆಪಿ ಪಾಲಿಗೆ ಸಿಕ್ಕಿತ್ತು. ನಗರ ಮತದಾರರಿಂದ ಉಳಿದ 40 ಸ್ಥಾನಗಳನ್ನು ಬಾಚಿಕೊಳ್ಳಲಾಗಿತ್ತು. 2013ರಲ್ಲಿ ಕೇವಲ 58 ಸ್ಥಾನಗಳನ್ನು ಕಾಂಗ್ರೆಸ್ ಪಡೆದಿತ್ತು. ಇದರಲ್ಲಿ ಹಳ್ಳಿ ಭಾಗದಿಂದ ಕಾಂಗ್ರೆಸ್ ಗೆ 55 ಸೀಟು ಸಿಕ್ಕಿದ್ದು, ಕೇವಲ 3 ಸ್ಥಾನಗಳನ್ನಷ್ಟೇ ನಗರ ಭಾಗದಿಂದ ಗೆದ್ದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv