ತುಮಕೂರು: ಓಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಜಿಲ್ಲೆಗೆ ಕೇರಳದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಿಂದ ಬಂದವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ಹೆಚ್ಚು ಪ್ರಕರಣಗಳು ಕಂಡು ಬಂದರೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ತಾಲೂಕಾಸ್ಪತ್ರೆಯಲ್ಲೂ 500-600 ಆಕ್ಸಿಜನ್ ಸಾಂದ್ರಕಗಳಿವೆ. ಜೊತೆಗೆ ಪ್ರತಿ ತಾಲೂಕಿನಲ್ಲಿ 5-6 ಐಸಿಯು ಬೆಡ್ ಇದೆ ಎಂದರು.
ಈ ಬಾರಿ ಮಕ್ಕಳ ಪ್ರಕರಣ ಹೆಚ್ಚು ಕಂಡುಬರುವ ಸಾಧ್ಯತೆ ಇದೆ. ಹಾಗಾಗಿ 200 ಮಕ್ಕಳ ವೈದ್ಯರನ್ನು ಕರೆಸಿ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ. ಐಸಿಯು ಬೆಡ್ ಸೇರಿದಂತೆ ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಪ್ರಕರಣದಲ್ಲಿ ಡೆತ್ ರೇಟ್ ಕಡಿಮೆ ಇದೆ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಸೂಚಿಸಿದರು.
ಈ ಬಗ್ಗೆ ಡಿ. 9 ರಂದು ಸಚಿವ ಸಂಪುಟ ತುರ್ತು ಸಭೆ ನಡೆಸಲಾಗುವುದು. ನೀತಿ ಸಂಹಿತೆ ಇರುವುದರಿಂದ ಜಿಲ್ಲೆಯಲ್ಲಿ ಸಚಿವರಿಂದ ಸಭೆ ನಡೆಸಲು ಆಗುತ್ತಿಲ್ಲ. ಹಾಗಾಗಿ ಕೋವಿಡ್ ಸಂಬಂಧಿಸಿದಂತೆ ಉಸ್ತುವಾರಿ ನೋಡಿಕೊಳ್ಳಲು ಕಷ್ಟವಾಗುತ್ತಿದೆ. ಇದರಿಂದಾಗಿ ಡಿ. 9ರಂದು ಸಚಿವ ಸಂಪುಟ ಸಭೆ ಕರೆದು ನಂತರ ನಾವು ಕಾರ್ಯೋನ್ಮುಖರಾಗುತ್ತೇವೆ ಎಂದರು.
ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕಷ್ಟ. ಆದರೆ ಉಳಿದ ಜಿಲ್ಲೆಗಳಲ್ಲಿ ದೇವೇಗೌಡರಲ್ಲಿ ಸಹಕಾರಕ್ಕಾಗಿ ಮನವಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಫೋಟೋಶೂಟ್ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್ನಲ್ಲಿ ಗ್ಯಾಂಗ್ರೇಪ್
ತುಮಕೂರಿನಲ್ಲಿ ಮೈತ್ರಿ ಇಲ್ಲ. ಬಿಜೆಪಿ -ಜೆಡಿಎಸ್ ಎರಡೂ ಕಡೆಯ ಅಭ್ಯರ್ಥಿಗಳು ಆಳವಾಗಿ ಪ್ರಚಾರ ಮಾಡಿದ್ದಾರೆ. ಈ ಹಂತದಲ್ಲಿ ಯಾರೂ ಕಣದಿಂದ ನಿವೃತ್ತಿಯಾಗೋದು ಕಷ್ಟ. ಇದರಿಂದಾಗಿ ತುಮಕೂರು ಮೈತ್ರಿ ಚರ್ಚೆಯಾಗಿಲ್ಲ. ಆದರೂ ವರಿಷ್ಠರು ಚರ್ಚೆ ಮಾಡಿದರೆ ಅದು ಅವರಿಗೆ ಬಿಟ್ಟ ತೀರ್ಮಾನ. ಅದರ ಬಗ್ಗೆ ನಾನು ಮಾತನಾಡೋಕೆ ಹೋಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್