ಬೆಂಗಳೂರು: ವಿಪಕ್ಷ ಹಾಗೂ ಸಿಎಲ್ ಪಿ ನಾಯಕತ್ವ ಎರಡರಲ್ಲೂ ತಾವೇ ಮುಂದುವರಿಯುವ ಜೊತೆಗೆ ಕೆಪಿಸಿಸಿಗೂ ತಮ್ಮವರನ್ನೇ ಆಯ್ಕೆ ಆಗುವಂತೆ ನೋಡಿಕೊಳ್ಳಲು ಸೋನಿಯಾ ಗಾಂಧಿ ಭೇಟಿಗೆ ತೆರಳಿದ್ದ ಸಿದ್ದರಾಮಯ್ಯಗೆ ಸೋನಿಯ ಗಾಂಧಿ ಡಬಲ್ ಶಾಕ್ ಕೊಟ್ಟಿದ್ದಾರೆ. ಸೋನಿಯಾ ಗಾಂಧಿ ಭೇಟಿ ಸಂದರ್ಭದಲ್ಲಿ ತಮ್ಮ ಸ್ಥಾನವೇ ಭದ್ರವಲ್ಲ ಎಂಬುದನ್ನ ತಿಳಿದು ಸಿದ್ದರಾಮಯ್ಯ ಶಾಕ್ ಆಗಿದ್ದಾರೆ. ಅದರಲ್ಲೂ ಆ ಎರಡು ವರದಿಗಳ ಬಗ್ಗೆ ಕೇಳಿ ಇನ್ನು ಶಾಕ್ ಆಗಿದ್ದಾರೆ.
25 ನಿಮಿಷಗಳ ಕಾಲ ಮಾತುಕತೆಯಲ್ಲಿ ಸಿದ್ದರಾಮಯ್ಯ ಮಾತನ್ನ ಆಲಿಸಿದ ಸೋನಿಯಾ ಗಾಂಧಿ ಶಾಕಿಂಗ್ ವಿಷಯವೊಂದನ್ನ ತಿಳಿಸಿದ್ದಾರೆ. ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ ಮಧುಸೂದನ್ ಮಿಸ್ತ್ರಿ ಒಟ್ಟು ಎರಡು ವರದಿ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೆಡಿಎಸ್ ಮೇಲಿನ ವಿರಸಕ್ಕೆ ಕಾಂಗ್ರೆಸ್ನಲ್ಲಿ ವೀಕ್ ಆದ ಸಿದ್ದರಾಮಯ್ಯ!
ಒಂದು ವರದಿಯ ಪ್ರಕಾರ ರಾಜ್ಯ ನಾಯಕರು ವಿಪಕ್ಷ ನಾಯಕರಾಗಿ ನಿಮ್ಮನ್ನೆ ಮುಂದುವರಿಸಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸಿಎಲ್ ಪಿಗೆ ಬೇರೆಯವರ ಆಯ್ಕೆ ಅನಿವಾರ್ಯವಾಗಿದೆ ಎಂದಿದ್ದಾರೆ. ಜೊತೆಗೆ ಎರಡನೆ ವರದಿ ಬಗ್ಗೆ ಪ್ರಸ್ತಾಪಿಸಿದ ಸೋನಿಯಾ ಗಾಂಧಿ ನಿಮಗೆ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್ ಪಿ ನಾಯಕನ ಸ್ಥಾನ ಎರಡರ ಬಗ್ಗೆಯು ಆಸಕ್ತಿ ಇಲ್ಲದಿದ್ದರೆ, ಬೇರೆ ಯಾರಿಗೆ ಮಣೆ ಹಾಕಬೇಕು ಎಂಬುದರ ಬಗ್ಗೆಯು ಪ್ರತ್ಯೇಕ ವರದಿ ಕೊಟ್ಟಿದ್ದಾರೆ. ಅದರಂತೆ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ. ಆದರೆ ಸಿಎಲ್ ಪಿ ನಾಯಕನ ಸ್ಥಾನ ಹಾಗೂ ವಿಪಕ್ಷ ನಾಯಕನ ಸ್ಥಾನ ಎರಡರಲ್ಲಿ ನಿಮ್ಮ ಒಂದು ಆಯ್ಕೆ ಯಾವುದು ಎಂದು ನೇರವಾಗಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ತಮಗೆ ಎರಡು ಸ್ಥಾನ ತಮ್ಮ ಬೆಂಬಲಿಗರಿಗೆ ಕೆಪಿಸಿಸಿ ಪಟ್ಟ ಅಂತ ಆಸೆಯಿಂದ ಹೋಗಿದ್ದ ಸಿದ್ದರಾಮಯ್ಯಗೆ ನಿರಾಸೆಯಾಗಿದೆ. ಜೊತೆಗೆ ಎಐಸಿಸಿ ಗೆ ತಲುಪಿರುವ ಎರಡು ವರದಿ ತಮ್ಮ ವಿರುದ್ಧವಾಗಿದೆ ಎಂಬುದನ್ನ ಕೇಳಿ ಸಿದ್ದರಾಮಯ್ಯಗೆ ಶಾಕ್ ಆಗಿದೆ. ಹೀಗೆ ಅನಿರೀಕ್ಷಿತ ಶಾಕ್ ನಿಂದ ಕಂಗೆಟ್ಟ ಸಿದ್ದರಾಮಯ್ಯ ನಿಮ್ಮ ಪ್ರವಾಸ ಮುಗಿದ ನಂತರ ಮತ್ತೆ ಭೇಟಿಯಾಗುವುದಾಗಿ ಹೇಳಿ ವಾಪಾಸ್ ಬಂದಿದ್ದಾರೆ ಎನ್ನಲಾಗಿದೆ.