- ಸುಧಾಕರ್ದು ಐರನ್ ಲೆಗ್!
- ಯತ್ನಾಳ್ ಹಿಂದೂನೇ ಅಲ್ಲ
ದಾವಣಗೆರೆ: ನೀನು ಸಚಿವನಾಗಿದ್ದಾಗ ಮಾಡಬಾರದ್ದು ಮಾಡಿದ್ದೀಯಾ, ನಿನ್ನ ಬಂಡವಾಳ ಬಯಲು ಮಾಡ್ತೀನಿ ಎಂದು ಸಂಸದ ಸುಧಾಕರ್ (K.Sudhakar) ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ (M.P. Renukacharya) ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷರ ವಿಜಯೇಂದ್ರ (B.Y Vijayendra) ವಿರುದ್ಧ ಮಾತಾಡಿದ್ದ ಡಾ.ಸುಧಾಕರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ನೀನು ಕಾಂಗ್ರೆಸ್ನಲ್ಲಿ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದು, ಸ್ಥಾನ ಕೊಡದಿದ್ದಕ್ಕೆ ಮುಂಬೈಗೆ ಹೋಗಿ ಬಂದೆ. ಬಿಜೆಪಿಗೆ ಬಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಖಾತೆ ಬೇಕು ಎಂದು ಮುನಿಸಿಕೊಂಡು ಮನೆಯಲ್ಲಿ ಕೂತಿದ್ದೆ. ನಿನ್ನ ಥರ್ಡ್ ಕ್ಲಾಸ್ ರಾಜಕಾರಣ ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಚಿವನಾಗಿದ್ದಾಗ ಶಾಸಕರ ಕರೆ ಸ್ವೀಕಾರ ಮಾಡುತ್ತಿರಲ್ಲ. ನಾನು ಜಗಳ ಮಾಡಿ ಹೊನ್ನಾಳಿಗೆ 200 ಬೆಡ್ ಆಸ್ಪತ್ರೆ ತಂದೆ. ಯಡಿಯೂರಪ್ಪ ಅವರು ದಾವಣಗೆರೆಗೆ ಜಯದೇವ ಆಸ್ಪತ್ರೆ ಶಾಖೆ ಮಂಜೂರು ಮಾಡಿದ್ದರು. ಅದನ್ನ ರದ್ದು ಮಾಡಿದ್ದು ನೀನು. ಸಚಿವನಾಗಿದ್ದಾಗ ನೀನು ಮಾಡಬಾರದ್ದು ಮಾಡಿದ್ದೀಯಾ ನಿನ್ನ ಬಂಡವಾಳ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುಧಾಕರ್ ಪಕ್ಷಕ್ಕೆ ಒಂದು ಐರನ್ ಲೇಗ್. ಇಂತಹ ವ್ಯಕ್ತಿಯಿಂದಲೇ ನಾವುಗಳು ಸೋತಿದ್ದು. ಇವರು ನಡೆದುಕೊಂಡ ರೀತಿಯಿಂದ ಬಿಜೆಪಿ ವಿಧಾನ ಸಭೆಯಲ್ಲಿ ಸೋತಿದೆ. ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಹುಷಾರ್ ಎಂದು ಎಚ್ಚರಿಸಿದ್ದಾರೆ.
ಇನ್ನೂ ಯತ್ನಾಳ್ (Basangouda Patil Yatnal) ಅವರು ಆಕಾಶಕ್ಕೆ ಉಗುಳುವ ಕೆಲಸ ಮಾಡುತ್ತಿದ್ದಾರೆ. ಉಗುಳಿದ್ದು ಅವರ ಮೇಲೆ ಬೀಳುತ್ತದೆ. ಜೆಡಿಎಸ್ಗೆ ಯಾಕೆ ಹೋಗಿದ್ದೆ? ಟಿಪ್ಪು ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದೆ. ಎಲ್ಲರಿಗೂ ಬಿರಿಯಾನಿ ತಿನ್ನಿಸಿದ್ದೆ. ನೀವು ಹಿಂದೂನೇ ಅಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.