ದಾವಣಗೆರೆ: ನಿಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರು ಬಹಿರಂಗಪಡಿಸಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ಅವರು, ಬಿಜೆಪಿ ಸಚಿವರು, ಶಾಸಕರು ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ ಪಕ್ಷದವರು ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ. ಬಿಜೆಪಿಯ ಎಲ್ಲ ಶಾಸಕರು ಸಿಂಹಗಳಿದ್ದಂತೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಗಲು ಕನಸು ಕಾಣುತ್ತಾ ಭ್ರಮಾಲೋಕದಲ್ಲಿ ಇರಬೇಡಿ. ನಿಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರು ಬಹಿರಂಗಪಡಿಸಿ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್ಗೇ ತಂದ!
ಕಾಂಗ್ರೆಸ್ ಅವರು ತಮ್ಮಲ್ಲಿರುವ ವ್ಯತ್ಯಾಸಗಳನ್ನು ಮರೆಮಾಚಲು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಎರಡು ಬಾರಿ ಪ್ರತಿಪಕ್ಷದ ಸ್ಥಾನ ಕಳೆದುಕೊಂಡಿದ್ದೀರಿ. ಕಾಂಗ್ರೆಸ್ ದೇಶದಲ್ಲಿಯೇ ವಿಳಾಸ ಇಲ್ಲದಂತಾಗಿದೆ. ರಾಜ್ಯದಲ್ಲಿ ಹಿಂದೆ ಕಾಂಗ್ರೆಸ್ ನಿಂದ 121 ಶಾಸಕರು ಇದ್ರಿ ಈಗ ಎಷ್ಟು ಜನ ಇದೀರಾ ಲೆಕ್ಕಾ ಹಾಕಿ. ನೀವು ಧರ್ಮ ಹೊಡೆಯುತ್ತೀರಿ, ಜಾತಿಯ ವಿಷ ಬೀಜ ಬಿತ್ತುತ್ತೀರಿ. ನಾಟಕೀಯವಾಗಿ ಪಾದಯಾತ್ರೆ ಮಾಡ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.
2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಬಿಜೆಪಿಗೆ ಬಂದರೂ ಆಶ್ಚರ್ಯಪಡಬೇಕಿಲ್ಲ. ಕಾಂಗ್ರೆಸ್ ನ ಹಿರಿಯ ಶಾಸಕ, ಮಾಜಿ ಸಚಿವರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ನಮ್ಮ ಶಾಸಕರ ಜೊತೆ ಮಾತನಾಡಿದ್ದಾರೆ. ಕಾಂಗ್ರೆಸ್ನಲ್ಲಿದ್ದವರಿಗೆ ಭವಿಷ್ಯವಿಲ್ಲ, ಕಾಂಗ್ರೆಸ್ ಮುಳುಗುವ ಹಡಗು ಎಂದು ಟೀಕಿಸಿದ್ದಾರೆ.
ಮಧ್ಯ ಕರ್ನಾಟಕಕ್ಕೆ ಒಂದು ಸಚಿವ ಸ್ಥಾನ ನೀಡ್ಬೇಕೆಂದು ಸಿಎಂಗೆ ಕೇಳಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಸಚಿವ ಸ್ಥಾನಕ್ಕಾಗಿ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದೇವೆ. ಸಿಎಂ ಬೊಮ್ಮಾಯಿ ಸಮರ್ಥರಾಗಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ನಾನು ಯತ್ನಾಳ್ ಆತ್ಮೀಯ ಸ್ನೇಹಿತರು, ನಮ್ಮ ಮಧ್ಯೆ ಸಣ್ಣಪುಟ್ಟ ವ್ಯತ್ಯಾಸಗಳು ಬಂದಿವೆ. ಯತ್ನಾಳ್ ಹಾಗೂ ನನ್ನಿಂದ ಪಕ್ಷಕ್ಕೆ ಮುಜುಗರ ಆಗಬಾರದೆಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಾತನಾಡಿದ್ವೀ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಪ್ಪು ಮುಸುಕು ಧರಿಸಿ ಸರ್ಕಾರದ ವಿರುದ್ಧ ಸಫಾಯಿ ಕರ್ಮಚಾರಿಗಳ ಆಕ್ರೋಶ
2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲು ಇಬ್ಬರು ಆತ್ಮೀಯ ಸ್ನೇಹಿತರಾಗಿ ಕೆಲಸ ಮಾಡುತ್ತೇವೆ. ಸಚಿವ ಸ್ಥಾನಕ್ಕಾಗಿ ನಾನು ಯಾವತ್ತೂ ಹಠ ಹಿಡಿದಿಲ್ಲ. ಸಚಿವ ಸ್ಥಾನಕ್ಕೆ ಹಠ ಹಿಡಿದಿದ್ದರೆ ಯಾವತ್ತೋ ಸಚಿವನಾಗುತ್ತಿದ್ದೆ ಎಂದಿದ್ದಾರೆ.