ಉಡುಪಿ: ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಳಿಸಿದರು.
ಮಂಗಳೂರು ಪ್ರವಾಸದಿಂದ ಬೆಂಗಳೂರಿಗೆ ವಾಪಾಸ್ ಹೋದ ಸಿದ್ದರಾಮಯ್ಯ ನಡೆಗೆ ಮಾಜಿ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಉಡುಪಿಗೆ ಬರಲು ಸಿದ್ದರಾಮಯ್ಯ ಪ್ಲ್ಯಾನ್ ಹಾಕಿಕೊಂಡಿದ್ದರು. ಮಂಗಳೂರು ಪ್ರವಾಸದಲ್ಲಿ ಅವರು ಸಂಪೂರ್ಣ ಬಳಲಿ ಹೋದರು. ಅವರ ದೇಹಕ್ಕೆ ಸ್ಟಂಟ್ ಅಳವಡಿಸಲಾಗಿದೆ. ಎರಡು ಮೂರು ದಿನದಲ್ಲಿ ಇನ್ನೊಮ್ಮೆ ಉಡುಪಿಗೆ ಬರುತ್ತಾರೆ ಎಂದು ಹೇಳಿದರು.
ಹೆಲಿಕಾಪ್ಟರ್, ವಿಶೇಷ ವಿಮಾನ ಮೂಲಕ ಬರುತ್ತಾರೆ. ದಯವಿಟ್ಟು ಯಾರೂ ಸಣ್ಣತನದ ಆಲೋಚನೆ ಮಾಡಬೇಡಿ ಎಂದು ಮಾಧ್ಯಮದ ಮೇಲೆ ಗರಂ ಆದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೃಷ್ಣ ಮಠಕ್ಕೆ ಭೇಟಿ ನೀಡದೇ ಇರುವುದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಈ ಘಟನೆಯನ್ನು ಹಿಂದಿನ ಬೆಳವಣಿಗೆಗಳ ಜೊತೆ ತಳುಕು ಹಾಕಬೇಡಿ ಎಂದು ಹೇಳಿದರು.