ಕೊಪ್ಪಳ: ದಾವಣಗೆರೆಯಲ್ಲಿ (Davanagere) ನಡೆಯಲಿರುವ ವೀರಶೈವ ಸಮಾವೇಶದ (Veerashaiva samavesha) ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ಈ ಕುರಿತು ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಈಶ್ವರ ಖಂಡ್ರೆ ಅವರನ್ನು ಕೇಳಬೇಕು ಎಂದು ಸಚಿವ ಎಂ.ಬಿ. ಪಾಟೀಲ್ (M.B. Patil) ಸಿಡಿಮಿಡಿಗೊಂಡಿದ್ದು, ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ತಾವರಗೇರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶದಲ್ಲಿ ಭಾಗವಹಿಸುವ ಬಗ್ಗೆ ವಿಚಾರ ಮಾಡುತ್ತೇನೆ. ಸಮಾವೇಶದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸಮಾವೇಶದ ಬಗ್ಗೆ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಈಶ್ವರ ಖಂಡ್ರೆ ಅವರನ್ನು ಕೇಳಬೇಕು ಎಂದಿದ್ದಾರೆ. ಇದನ್ನೂ ಓದಿ: ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷಗಿರಿಗೆ ಬ್ರಿಜ್ ಭೂಷಣ್ ಬೆಂಬಲಿತ ಅಭ್ಯರ್ಥಿ ಆಯ್ಕೆ
ಲೋಕಸಭೆಯಲ್ಲಿ ಸಂಸದರ ಅಮಾನತು ಮಾಡಿದ ವಿಚಾರವಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದಲ್ಲಿ ಸಂವಿಧಾನಾತ್ಮಕವಾಗಿ ಪ್ರತಿಭಟನೆ ನಡೆಸಲಾಗುತ್ತದೆ. ಅದಕ್ಕಾಗಿ ಸಂಸದರನ್ನು ಅಮಾನತು ಮಾಡಿದ್ದು ಸರಿಯಾದ ಕ್ರಮವಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಸದರನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡುವುದರಲ್ಲೂ ಇತಿಹಾಸ ಸೃಷ್ಟಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಶಾಸಕ ಬಿ.ಆರ್. ಪಾಟೀಲ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ನಮ್ಮ ಪಕ್ಷದ ಹಿರಿಯರು. ಹಳೇ ಸರ್ಕಾರದ ಬಜೆಟ್ನಲ್ಲಿ ಅನುದಾನ ನೀಡಲು ಆಗಿಲ್ಲ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಹಳೇ ಬಜೆಟ್ ಮುಂದುವರಿಸಿದ್ದೇವೆ. ಲಕ್ಷಾಂತರ ರೂ. ಅನುದಾನ ಬಿಡುಗಡೆ ಬಾಕಿ ಇಟ್ಟು ಹೋಗಿದ್ದಾರೆ. ನಮ್ಮ ಸಿಎಂ ಸಮರ್ಥರಿದ್ದು, ಮಾರ್ಚ್ ಒಳಗಾಗಿ ಎಲ್ಲಾ ಶಾಸಕರಿಗೆ ಅನುದಾನ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಂಸದರಿಗೇ ರಕ್ಷಣೆ ಇಲ್ಲ, ಬೇರೆಯವ್ರಿಗೆ ಹೇಗೆ ಎಂದು ಪ್ರಶ್ನಿಸಿದ ನಮ್ಮನ್ನೂ ಅಮಾನತು ಮಾಡಿದ್ರು: ಡಿಕೆ ಸುರೇಶ್