ಅಕ್ಕಿ ರಾಜಕೀಯದ ನಡುವೆ ರಾಜ್ಯದಲ್ಲಿ ಪಂಚೆ ಪಾಲಿಟಿಕ್ಸ್

Public TV
2 Min Read
PANCHE POLITICS

– ವಿಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಕಾಲೆಳೆದ `ಕೈ’

ಬೆಂಗಳೂರು: ರಾಜ್ಯದಲ್ಲಿ ಅಕ್ಕಿ ರಾಜಕೀಯ ಮಧ್ಯೆ `ಪಂಚೆ’ ಪಾಲಿಟಿಕ್ಸ್ ಶುರುವಾಗಿದೆ. ಕಾಂಗ್ರೆಸ್‍ಗೆ (Congress) ಟಕ್ಕರ್ ಕೊಡುವ ಮಧ್ಯೆಯೇ ಬಿಜೆಪಿಯೊಳಗಿನ ಅಸಮಾಧಾನ ತಣ್ಣಗಾಗುತ್ತಿಲ್ಲ. ವಿಪಕ್ಷ ನಾಯಕನ ಆಯ್ಕೆ ವಿಳಂಬ ಕಾಂಗ್ರೆಸ್‍ಗೆ ಅಸ್ತ್ರವಾಗಿದೆ. ಈ ನಡುವೆ ಶನಿವಾರವೂ ಕೂಡ ರೇಣುಕಾಚಾರ್ಯ (MP Renukacharya) ವಾಗ್ದಾಳಿ ಮುಂದುವರಿದಿದೆ.

ವಿವಾದದ ಕಿಡಿ ಎಬ್ಬಿಸಿದ ಕಾಂಗ್ರೆಸ್ಸಿನ `ಪಂಚೆ’ ಟ್ವೀಟ್ ರಾಜಕೀಯ ಕದನಕ್ಕೆ ವೇದಿಕೆ ಆಗಿದೆ. ರೇಣುಕಾಚಾರ್ಯ ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ಟೀಕಿಸಲು ಕಾಂಗ್ರೆಸ್ `ಪಂಚೆ’ ಅಸ್ತ್ರ ಪ್ರಯೋಗಿಸಿದೆ. ಪಂಚೆಯೊಳಗೆ ಬಿಜೆಪಿ ಸಿಲುಕಿ ಒದ್ದಾಡ್ತಿದೆ. `ಪಂಚೆ’ ಪಡೆ ಗೆಲ್ಲುವುದೋ…? ಬಿಎಸ್‍ವೈ ಬ್ರಿಗೇಡ್ ಗೆಲ್ಲುತ್ತೋ…? ಅಂತಾ ಸರಣಿ ಟ್ವೀಟ್ ಮೂಲಕ ಕಾಲೆಳೆದಿತ್ತು. ಇದಕ್ಕೆ ಸಿ.ಟಿ.ರವಿ ಟಕ್ಕರ್ ಕೊಟ್ಟು ಪಂಚೆ ಟ್ವೀಟ್ ಮಾಡಿ ಸಿದ್ದರಾಮಯ್ಯಗೆ ಡಿಕೆ ಗ್ಯಾಂಗ್ ಹೇಳಿರಬೇಕು. ಸಿದ್ದರಾಮಯ್ಯ (Siddaramaiah) ಹುಷಾರಾಗಿ ಇರೋಕೆ ಹೇಳಿ ಅಂತೇಳಿ ವ್ಯಂಗ್ಯವಾಡಿದ್ರು. ಇತ್ತ ಸಿದ್ದರಾಮಯ್ಯ ಲುಂಗಿ ಲೀಡರ್ ಅನ್ನೋದು ಮರೀಬಾರದು ಎಂದು ಪ್ರಹ್ಲಾದ್ ಜೋಶಿ (Pralhad Joshi) ಟಾಂಗ್ ಕೊಟ್ಟರೆ, ಪಂಚೆ ಲೀಡರ್‍ಗಳಿಗೆ ಜನ ಪಾಠ ಕಲಿಸಿದ್ದಾರೆಂದ ಚಲುವರಾಯಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಇಲಿಗಳು ಅಕ್ಕಿ ತಿನ್ನಲಿ ಅಂತಾ ಬಿಜೆಪಿಯವರು ಗೋದಾಮುಗಳಲ್ಲಿ ಮುಚ್ಚಿಟ್ಟಿದ್ದಾರೆ: ಈಶ್ವರ್ ಖಂಡ್ರೆ

ಈ ನಡುವೆ ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ನಾಳೆಯೇ ವಿಪಕ್ಷ ನಾಯಕನ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬಹಿರಂಗ ಕದನವೂ ಮುಂದುವರಿದಿದೆ. ಶುಕ್ರವಾರ ಶಿಸ್ತಿನ ಗೆರೆ ಎಳೆದು ಖಡಕ್ ಸೂಚನೆ ಕೊಟ್ಟಿದ್ದರೂ ರೇಣುಕಾಚಾರ್ಯ ಮಾತು ನಿಂತಿಲ್ಲ. ನಿನ್ನೆ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಡೋಂಟ್ ಕೇರ್ ಎಂದಿದ್ದ ರೇಣುಕಾಚಾರ್ಯ ಇವತ್ತು ಬಿಎಸ್‍ವೈ (B S Yediyurappa) ನಿವಾಸಕ್ಕೆ ದೌಡಾಯಿಸಿ ವಿವರಣೆ ಕೊಟ್ಟರು. ಬಿಎಸ್‍ವೈ ಭೇಟಿ ಬಳಿಕವೂ ಬಹಿರಂಗ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆಯುತ್ತೇನೆ. ಯಡಿಯೂರಪ್ಪರನ್ನ ಟೀಕಿಸಿದಾಗ ನೋಟೀಸ್ ಕೊಡದವರು ಈಗ ಏಕೆ ಕೊಟ್ಟರು..? ನಾನು ಕಾಂಗ್ರೆಸ್ ಸೇರಲ್ಲ, ಬಿಜೆಪಿಯಲ್ಲೇ ಇರುತ್ತೇನೆ ಅಂತಾ ವಿರೋಧಿಗಳಿಗೆ ಟಾಂಗ್ ಕೊಟ್ಟರು.

ಒಟ್ಟಿನಲ್ಲಿ ಬಿಜೆಪಿ ಎರಡು ಹೋರಾಟಗಳ ಸಂಕಟದಲ್ಲಿದ್ದು, ಕಾಂಗ್ರೆಸ್ ಪಕ್ಷದ ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗ ಒಂದೆಡೆಯಾದರೆ ಪಕ್ಷದೊಳಗಿನ ಕೊತ ಕೊತ ಅಸಮಾಧಾನಕ್ಕೆ ತಣ್ಣೀರು ಹಾಕಲು ಹರಸಾಹಸಪಡಬೇಕಾಗಿದ್ದು, ಹೈಕಮಾಂಡ್ ನಡೆ ಕುತೂಹಲ ಮೂಡಿಸಿದೆ.

Web Stories

Share This Article