ಬೆಂಗಳೂರು: ಈ ಬಾರಿಯ ಚಂದ್ರಗ್ರಹಣ ಎಲ್ಲಾ ರಾಶಿ ನಕ್ಷತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜೊತೆಗೆ ರಾಜಕೀಯದ ಮೇಲೂ ಗ್ರಹಣ ಹೆಚ್ಚಿನ ಪ್ರಭಾವ ಬೀರಲಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಹೀಗಾಗಿ ರಾಜಕೀಯ ನಾಯಕರಿಗೂ ಢವಢವ ಶುರುವಾಗಿದೆ.
ಸಿಎಂ ಯಡಿಯೂರಪ್ಪ ಡಿಸೆಂಬರ್ 26ರಂದು ಸಂಭವಿಸಿದ್ದ ಕಂಕಣ ಸೂರ್ಯಗ್ರಹಣ ಸಮಯದಲ್ಲಿ ಕೇರಳದ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ಮಾಡಿದ್ದರು. ಈಗ ತೋಳ ಚಂದ್ರಗ್ರಹಣದಿಂದ ರಾಜಕೀಯದ ಮೇಲಿನ ಹೆಚ್ಚಿನ ಪ್ರಭಾವ ಬೀರುತ್ತೆ ಅಂದ್ರೆ ಕೇಳಬೇಕೇ? ಇದ್ರಿಂದ ಸಿಎಂ ಈಗ ಫುಲ್ ಟೆನ್ಶನ್ ಆಗ್ಬಿಟ್ಟಿದ್ದಾರೆ.
ಗವಿಗಂಗಾಧರ ದೇಗುಲದ ಪ್ರದಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಪ್ರತಿಕ್ರಿಯಿಸಿ, ರಾಜಕೀಯ ವ್ಯಕ್ತಿಗಳಿಗೆ ಶತ್ರು ಭಾದೆ ಹೆಚ್ಚಾಗುವ ಸಾಧ್ಯತೆಯಿದೆ. ರಾಜಕೀಯವಾಗಿ ಅಂದುಕೊಂಡಿದ್ದನ್ನು ಸಾಧಿಸಲಾಗದ ದ್ವಂದ್ವ ಸ್ಥಿತಿ ನಿರ್ಮಾಣ ಸಾಧ್ಯತೆಯಿದೆ. ಜಲಕಂಟಕದ ಭೀತಿಯಿಂದ ರಾಜಕೀಯ ನಾಯಕರು ಫುಲ್ ಟೆನ್ಶನ್ ಆಗಲಿದ್ದು ದೇಶ-ದೇಶದ ಮಧ್ಯೆ ಗಲಾಟೆ, ಕಿತ್ತಾಟ, ನಡೆಯುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಈಗಾಗಲೇ ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರವಾಗಿ ದೇಶದಲ್ಲಿ ರಾಜಕೀಯ ಸಂಘರ್ಷಗಳು ಹೆಚ್ಚಾಗಿವೆ. ಹೀಗಿರುವಾಗ ಈ ಗ್ರಹಣ ಭವಿಷ್ಯ ರಾಜಕೀಯ ನಾಯಕರನ್ನ ಮತ್ತಷ್ಟು ಹೆದರಿಸಿದೆ. ಹೀಗಾಗಿ ಈಗಾಗಲೇ ರಾಜಕೀಯ ವ್ಯಕ್ತಿಗಳು ತಮ್ಮ ಜಾತಕವನ್ನು ಹಿಡಿದುಕೊಂಡು ಜ್ಯೋತಿಷಿಗಳ ಸಲಹೆಗಳನ್ನು ಪಡೆಯುತ್ತಿದ್ದಾರಂತೆ.
ಸದ್ಯ ಗ್ರಹಣ ದೋಷ ನಿವಾರಣೆಗಾಗಿ ಸೂರ್ಯೋದಯದ ಮುನ್ನ ಶಿವನದರ್ಶನ ಪಡೆಯಬೇಕು ಎಂದು ಜ್ಯೋತಿಷಿಗಳು ಸಲಹೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ತೋಳ ಚಂದ್ರಗ್ರಹಣ ರಾಜಕೀಯ ನಾಯಕರಲ್ಲಿ ಭಯ ಸೃಷ್ಟಿಸಿದೆ.