ಲಕ್ನೋ: ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆಯುವುದು ಸಾಮಾನ್ಯ. ಆದರೆ ಲಕ್ನೋದ ಬೇಕರಿ ವ್ಯಾಪಾರಿಗಳು ಪಟಾಕಿ ರೂಪದಲ್ಲೇ ಸ್ವೀಟ್ಗಳನ್ನು ತಯಾರಿಸಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ದೀಪಾವಳಿಗೆ ಹೆಚ್ಚು ಪಟಾಕಿ ಹೊಡೆಯುವುದರಿಂದ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯವಾಗುತ್ತದೆ. ಇದರ ಬದಲು ಪಟಾಕಿ ರೀತಿಯಲ್ಲೇ ಇರುವ ಈ ಸಿಹಿ ತಿನಿಸುಗಳನ್ನು ಕೊಂಡ ತಿನ್ನುವುದರಿಂದ ಪರಿಸರ ಮಾಲಿನ್ಯವನ್ನು ತಡೆಯಬಹುದು. ಇದರ ಜೊತೆಗೆ ಈ ಸಿಹಿ ತಿಂಡಿಗಳು ಆರೋಗ್ಯಕರ ಮತ್ತು ಶುಗರ್ ಫ್ರೀ ಆಗಿದ್ದು, ಎಲ್ಲರೂ ತಿನ್ನಬಹುದು ಎಂದು ವ್ಯಾಪಾರಿಗಳು ಈ ಪ್ಲಾನ್ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಸ್ವೀಟ್ ವ್ಯಾಪಾರಿ ಕೃಷ್ಣ ಅಹಿರ್ವಾಲ್, ನಾವು ಈ ದೀಪಾವಳಿಗೆ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂದುಕೊಂಡಿದ್ದೇವು. ಈ ಕಾರಣದಿಂದಲೇ ಸಿಹಿ ತಿನಿಸುಗಳನ್ನು ಪಟಾಕಿಯ ರೀತಿಯಲ್ಲಿ ವಿನ್ಯಾಸ ಮಾಡಿದ್ದೇವೆ. ಕೆಲ ಗ್ರಾಹಕರು ಇದನ್ನು ನೋಡಿ ಬೇಕರಿಯಲ್ಲಿ ದೀಪಾವಳಿ ಪ್ರಯುಕ್ತ ಪಟಾಕಿ ಮಾರುತ್ತಿದ್ದಾರೆ ಎಂದು ಭಾವಿಸಿದ್ದರು. ನಂತರ ಅವು ಸ್ವೀಟ್ಸ್ ಎಂದು ತಿಳಿದಾಗ ಆಶ್ಚರ್ಯ ಪಟ್ಟರು ಎಂದು ಹೇಳಿದ್ದಾರೆ.
ಈ ವಿಧಾನದಿಂದ ಕಾರ್ಪೊರೇಟ್ ಸಂಸ್ಥೆಯಲ್ಲಿ ನೌಕರಿಗೆ ಗಿಫ್ಟ್ ಕೊಡುವವರಿಗೆ ಉಪಯೋಗವಾಗಿದೆ. ಪಟಾಕಿ ಸಿಡಿಸಿ ಪರಿಸರವನ್ನು ಹಾಳು ಮಾಡುವ ಬದಲು ಈ ರೀತಿ ಆರೋಗ್ಯಕ್ಕೆ ಒಳ್ಳೆಯದಾಗುವ ಶುಗರ್ ಫ್ರೀ ತಿಂಡಿಗಳನ್ನು ತಿಂದರೆ ಒಳ್ಳೆಯದು. ಇದನ್ನು ಮಕ್ಕಳಿಗೂ ಕೊಡಬಹುದು ಇದರಿಂದ ಮಕ್ಕಳು ನಮಗೆ ಪಟಾಕಿ ಕೊಡಿಸಿ ಎಂದು ಹಠಮಾಡುವುದಿಲ್ಲ ಎಂದು ಅಹಿರ್ವಾಲ್ ಹೇಳಿದ್ದಾರೆ.
ರಾಕೆಟ್ ಮತ್ತು ಬಾಂಬ್ ಸೇರಿದಂತೆ ಎಲ್ಲ ರೀತಿಯ ಪಟಾಕಿಗಳ ಮಾದರಿಯಲ್ಲಿ ತಿಂಡಿಗಳನ್ನು ವಿನ್ಯಾಸ ಮಾಡಿದ್ದೇವೆ. ಇದಕ್ಕೆ ಉತ್ತಮವಾದ ಪ್ಯಾಕಿಂಗ್ ಮಾಡಿದ್ದೇವೆ. ಈ ಎಲ್ಲವೂ ಜನರನ್ನು ಆಕರ್ಷಣೆ ಮಾಡುತ್ತಿದೆ. ಈಗ ಬಹಳ ಚೆನ್ನಾಗಿ ವ್ಯಾಪಾರವಾಗುತ್ತಿದೆ ಎಂದು ಬೇಕರಿ ಮಾಲೀಕ ಮನು ಅಗರ್ವಾಲ್ ಹೇಳಿದ್ದಾರೆ.