ಲಕ್ನೋ: ಇನ್ನೂ ಕೆಲವು ದಿನಗಳಲ್ಲಿ ಮದುವೆಯಾಗಲಿದ್ದ ಜೋಡಿಯನ್ನು ದೇವಸ್ಥಾನದಿಂದ ಹೊರ ಬರುತ್ತಿದ್ದಾಗ ಅಪರಿಚಿತನೊಬ್ಬ ಇಬ್ಬರ ಮೇಲೂ ಗುಂಡಿನ ದಾಳಿ ಮಾಡಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಅನ್ನು ಹಾಗೂ ಪ್ರೀತಿ ಮೃತ ದುರ್ದೈವಿಗಳು. ಅನ್ನು ಉತ್ತರಾಖಂಡ್ ಮೂಲದವರು ಎಂದು ತಿಳಿದು ಬಂದಿದ್ದು, ಇವರು ಗಾಜಿಯಾಬಾದ್ನ ವಿಜಯನಗರದಲ್ಲಿ ಗ್ಲಾಸ್ ವ್ಯಾಪಾರ ಮಾಡುತ್ತಿದ್ದರು. ಇಬ್ಬರು ಸೋಮವಾರ ಮುಂಜಾನೆ ಸ್ಕೂಟಿಯಲ್ಲಿ ದೇವಾಲಯಕ್ಕೆ ಬಂದಿದ್ದರು. ಆದರೆ ಇಬ್ಬರು ದೇವಸ್ಥಾನದಿಂದ ಹೊರಡುವಾಗ ಏಕಾಏಕಿ ದುಷ್ಕರ್ಮಿಯೊಬ್ಬ ಶೂಟ್ ಮಾಡಿದ್ದಾನೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಅನ್ನು ಮತ್ತು ಪ್ರೀತಿ ಪರಸ್ಪರ ಪ್ರೀತಿ ಮಾಡುತ್ತಿದ್ದು, ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದರು. ಇವರ ಪ್ರೀತಿಯ ಬಗ್ಗೆ ಎರಡು ಕುಟುಂಬದವರಿಗೂ ತಿಳಿದಿದೆ. ಬಳಿಕ ಇವರ ಪ್ರೀತಿಗೆ ಮನೆಯವರು ಒಪ್ಪಿ ಇನ್ನು ಕೆಲವು ದಿನಗಳಲ್ಲಿ ಮದುವೆಯನ್ನು ಫಿಕ್ಸ್ ಮಾಡಿದ್ದರು. ಆದರೆ ಸೋಮವಾರ ಇಬ್ಬರು ಪಾರ್ಕಿಗೆ ಹೋಗಿದ್ದು, ಅಲ್ಲಿಂದ ದೇವಸ್ಥಾನಕ್ಕೆ ಸ್ಕೂಟಿಯಲ್ಲಿ ಹೋಗಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರ ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿ ಏಳು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಇತ್ತ ಅನ್ನು ಮತ್ತು ಪ್ರೀತಿ ಇಬ್ಬರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಅಕ್ರಮ ಸಂಬಂಧ:
ಮೃತ ಅನ್ನು ಈಗಾಗಲೇ ಅನೇಕ ಮಹಿಳೆಯರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು ಎಂದು ತಿಳಿದು ಬಂದಿದೆ. ಅವರಲ್ಲಿಯೇ ಒಬ್ಬರು ಕೊಲೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕೊಲೆ ಸಂಬಂಧ ಪೊಲೀಸರು ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದು, ಅವರಲ್ಲಿ ಮಹಿಳೆಯ ಪತಿಯೊಬ್ಬ ಶೂಟ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತ ಅನ್ನು 70 ಗ್ರಾಂ ಚಿನ್ನವನ್ನು ಕಡಿಮೆ ಹಣಕ್ಕೆ ಗಿರಿವಿ ಇಟ್ಟಿದ್ದನು. ಈ ವೇಳೆ ನಾನು ಕೆಲವು ದಿನಗಳಲ್ಲಿ ಬಿಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದನು. ಆದರೆ ಚಿನ್ನ ಅಡವಿಟ್ಟ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಗಿರಿವಿ ಅಂಗಡಿ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಮಗೆ ಸುಮಾರು ಮುಂಜಾನೆ 8.30ರ ಸಮಯಕ್ಕೆ ದೇವಾಲಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂತು. ತಕ್ಷಣ ನಾವು ಸ್ಥಳಕ್ಕೆ ಧಾವಿಸಿದೆವು. ಇಬ್ಬರು ಹೊರಡುವಾಗ ಅಪರಿಚಿತನೊಬ್ಬ ಬಂದು ಮನಬಂದಂತೆ ಶೂಟ್ ಮಾಡಿ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಶ್ಲೋಕಾ ಕುಮಾರ್ ತಿಳಿಸಿದ್ದಾರೆ.
ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳನ್ನು ತನಿಖೆ ಮುಂದುವರಿಸಿದ್ದಾರೆ. ಕೊಲೆ ನಡೆದ ಸಮಯದಲ್ಲಿ ದೇವಸ್ಥಾನದ ಸಿಸಿಟಿವಿ ತಾಂತ್ರಿಕ ದೋಷದಿಂದ ಕೆಟ್ಟು ಹೋಗಿತ್ತು. ಹೀಗಾಗಿ ಆರೋಪಿಯನ್ನು ಪತ್ತೆ ಮಾಡುವುದು ಕಷ್ಟವಾಗಿದೆ.