ಹೈದರಾಬಾದ್: ಪ್ರೇಮಿಗಳ ಮದುವೆಗೆ ಪೋಷಕರು ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ನಡೆದ ಯುವಕ, ಯುವತಿ ಮದುವೆಯಾಗಿ ಬಳಿಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಂಡಲ ಪ್ರದೇಶದಲ್ಲಿ ನಡೆದಿದೆ.
ಧನಂಜಯ್ (20), ಪಲ್ಲವಿ (16) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋ ಮಾಡಿ ತಮ್ಮಂತಹ ಪ್ರೇಮಿಗಳನ್ನು ಬೇರೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಏನಿದು ಪ್ರಕರಣ: ಶ್ರೀಕಾಳಹಸ್ತಿ ಮೂಲದ ದಂಪತಿಗಳ ಪುತ್ರಿ ಪಲ್ಲವಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದು, ಕಳೆದ 1 ವರ್ಷದಿಂದ ಮುರುವಪಲ್ಲಿ ಮೂಲಕ ಧನಂಜಯ್ ಎಂಬ ಯುವಕನ್ನು ಪ್ರೀತಿಸುತ್ತಿದ್ದಳು. ಈತ ವೃತ್ತಿಯಲ್ಲಿ ಜೆಸಿಬಿ ಚಾಲಕನಾಗಿದ್ದು, ಇಬ್ಬರು ಮದುವೆ ಆಗಲು ನಿರ್ಧರಿಸಿ ಮನೆಯಲ್ಲಿ ತಮ್ಮ ಪ್ರೀತಿಯನ್ನು ತಿಳಿಸಿದ್ದರು. ಆದರೆ ಇಬ್ಬರ ಜಾತಿ ಬೇರೆ ಆದ ಕಾರಣದಿಂದ ಇವರ ಪ್ರೀತಿಗೆ ಪೋಷಕರು ವಿರೋಧ ಮಾಡಿದ್ದರು.
ಕಳೆದ ಮೂರು ದಿನಗಳ ಹಿಂದೆ ಕಾಲೇಜಿನಲ್ಲಿ ಪರೀಕ್ಷೆಯ ಫಲಿತಾಂಶ ನೋಡಿಕೊಂಡು ಬರುವುದಾಗಿ ತಿಳಿಸಿದ್ದ ಯುವತಿ ನಾಪತ್ತೆಯಾಗಿದ್ದಳು. ಆ ಬಳಿಕ ಇಬ್ಬರು ದೇವಾಲಯಕ್ಕೆ ತೆರಳಿ ಮದುವೆಯಾಗಿ ಫೋಟೋಗಳನ್ನು ತೆಗೆದುಕೊಂಡಿದ್ದರು. ಆದರೆ ಇಂದು ಮುಂಜಾನೆ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಂಡಲ ಮುರವಪಲ್ಲಿ ಬಳಿ ರೈಲ್ವೇ ಹಳಿ ಬಳಿ ಇಬ್ಬರ ಮೃತ ದೇಹ ಪತ್ತೆಯಾಗಿದ್ದು. ಆ ಅವರ ಬಳಿ ದೊರೆತ ಮೊಬೈಲ್ ನಲ್ಲಿ ವಿಡಿಯೋ ಲಭ್ಯವಾಗಿದೆ.
ನಮ್ಮನ್ನು ಕ್ಷಮಿಸಿ, ಇದು ನಮ್ಮ ಕೊನೆಯ ವಿಡಿಯೋ. ಈ ನೋಡಿದ ಬಳಿಕವಾದರು ನಮ್ಮಂತ ಬೇರೆ ಪ್ರೇಮಿಗಳನ್ನು ಬೇರೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಪೋಷಕರಿಗೆ ಕ್ಷಮಿಸುವಂತೆ ಕೋರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ದೇಹಗಳು ರೈಲ್ವೇ ಹಳಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಕುರಿತು ಪಾಕಾಲ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.