ಮಂಡ್ಯ: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೂಲತಃ ಮಳವಳ್ಳಿ ತಾಲೂಕಿನವರಾದ 23 ವರ್ಷದ ರಂಜಿತಾ ಮತ್ತು 24 ವರ್ಷದ ಯತೀಶ್ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಈ ಯುವ ಜೋಡಿ ಬೈಕಿನಲ್ಲಿ ಕೆ.ಶೆಟ್ಟಿಹಳ್ಳಿ ಗ್ರಾಮಕ್ಕೆ ಬಂದು ರೈತರೊಬ್ಬರ ಕಬ್ಬಿನ ಗದ್ದೆಯ ಬಳಿ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷಸೇವಿಸಿ ಸಾವನ್ನಪ್ಪಿದ ಯುವ ಜೋಡಿಯನ್ನು ಗ್ರಾಮಸ್ಥರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಬಿದ್ದಿದ್ದ ಮೊಬೈಲ್ ಫೋನ್ ಮತ್ತು ಆಧಾರ್ ಕಾರ್ಡ್ನಿಂದಾಗಿ ಇಬ್ಬರ ವಿಳಾಸ ಪತ್ತೆಯಾಗಿದೆ. ಇಬ್ಬರ ಪ್ರೇಮಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಸಂಬಂಧ ಕೆ.ಎಂ ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.