ನವದೆಹಲಿ: ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವತಿ ಆತನ ಮೇಲೆಯೇ ಆ್ಯಸಿಡ್ ಎರಚಿರುವ ಘಟನೆ ದೆಹಲಿಯ ವಿಕಾಸ್ಪುರಿ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಜೂನ್ 11 ರಂದು ನಡೆದಿದ್ದು, ಯುವತಿ ಪ್ರಿಯಕನ ಜೊತೆ ಮೋಟಾರ್ ಬೈಕಿನಲ್ಲಿ ಹಿಂದೆ ಕುಳಿತುಕೊಂಡು ಹೋಗುತ್ತಿದ್ದಳು. ಈ ವೇಳೆ ಆಕೆ ಪ್ರಿಯರಕನ ಹೆಲ್ಮೆಟ್ ತೆಗೆಯುವಂತೆ ಕೇಳಿದ್ದಾಳೆ. ಬಳಿಕ ಏಕಾಏಕಿ ಆ್ಯಸಿಡ್ ಎರಚಿದ್ದಾಳೆ. ಪ್ರೇಮಿಗಳ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ ಎಂದು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ಪೊಲೀಸರು ಹೋಗಿದ್ದು, ಅಲ್ಲಿ ಯುವತಿಯ ಕೈಗೆ ಸಣ್ಣ ಗಾಯಗಳಾಗಿತ್ತು. ಆದರೆ ಯುವಕನ ಮುಖ, ಕುತ್ತಿಗೆ ಮತ್ತು ಎದೆಯ ಮೇಲೆ ತೀವ್ರವಾದ ಗಾಯಗಳಾಗಿದ್ದನ್ನು ಪೊಲೀಸರು ಗಮನಿಸಿದ್ದಾರೆ.
ಪೊಲೀಸರಿಗೆ ಅನೇಕ ದಿನಗಳವರೆಗೆ ಅವರ ಮೇಲೆ ಆ್ಯಸಿಡ್ ದಾಳಿ ಮಾಡಿದವರು ಯಾರು ಎಂದು ಗೊತ್ತಾಗಲಿಲ್ಲ. ಆದರೆ ಈ ಬಗ್ಗೆ ವಿಚಾರಣೆ ಮಾಡುವಾಗ ಯುವಕ ನಾವು ಬೈಕಿನಲ್ಲಿ ಹೋಗುವಾಗ ಆ್ಯಸಿಡ್ ಎರಚಲಾಗಿದೆ ಎಂದು ಹೇಳಿದ್ದನು. ಜೊತೆಗೆ ಯುವತಿಯು ಹೆಲ್ಮೆಟ್ ತೆಗೆಯುವಂತೆ ನನ್ನ ಬಳಿ ಕೇಳಿಕೊಂಡಿದ್ದಳು. ಹೀಗಾಗಿ ಹೆಲ್ಮೆಟ್ ತೆಗೆದಿದ್ದೆ ಎಂದು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ಈ ಕೃತ್ಯವನ್ನು ತಾನೇ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಯುವಕ ಮತ್ತು ಯುವತಿ ಇಬ್ಬರೂ ಮೂರು ವರ್ಷಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಯುವಕ ಈ ರಿಲೇಷನ್ಶಿಪ್ ಅನ್ನು ಇಲ್ಲಿಗೆ ಕೊನೆಯಾಗಿಸೋಣ ಎಂದು ಕೇಳಿಕೊಂಡಿದ್ದನು. ಆದರೆ ಯುವತಿಗೆ ಆತನನ್ನು ಮದುವೆಯಾಗಬೇಕೆಂದು ಬಯಸಿದ್ದಳು. ಅದರಂತೆಯೇ ವಿವಾಹವಾಗೋಣ ಎಂದು ಪ್ರಿಯಕರನನ್ನು ಕೇಳಿದ್ದಾಳೆ. ಆದರೆ ಆತ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಈ ರೀತಿಯಾಗಿ ಮಾಡಿದ್ದಾಳೆ ಎಂದು ಡಿಸಿಪಿ ಮೋನಿಕಾ ಭಾರಾದ್ವಾಜ್ ತಿಳಿಸಿದ್ದಾರೆ.
ಯುವತಿಯ ಪರ್ಸ್ ನಲ್ಲಿ ಮನೆ ಸ್ವಚ್ಛ ಮಾಡಲು ಬಳಸುವ ಕೆಮಿಕಲ್ ಬಾಟಲ್ ಪತ್ತೆಯಾಗಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.