ಭುವನೇಶ್ವರ: ಯುವಕನೊಬ್ಬ ತನ್ನ ಪ್ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಇಬ್ಬರು ಸ್ನೇಹಿತರ ಜೊತೆ ಸೇರಿ ಪ್ರೇಯಸಿಯ ಮೇಲೆಯೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಈ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯ ಪಲ್ಲಹರಾದಲ್ಲಿ ನಡೆದಿದೆ. ಆರೋಪಿಯನ್ನು ಕಾಲಿಯಾ ಮಹಾಕುದ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ಪೋಷಕರು ಈ ಬಗ್ಗೆ ದೂರು ನೀಡಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕಾಲಿಯಾ ಮರಗೆಲಸ ಮಾಡುತ್ತಿದ್ದು, ಈತ ಕಳೆದ ಎರಡು-ಮೂರು ವರ್ಷಗಳಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಹುಡುಗಿ ಆರೋಪಿ ಕಾಲಿಯಾನ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ. ಬಳಿಕ ಇದರಿಂದ ಕೋಪಗೊಂಡು ಆರೋಪಿ ತನ್ನ ಸ್ನೇಹಿತರಾದ ಹೇಮಂತ್ ಮಹಾಕುದ್ ಮತ್ತು ದುಶಾಸನ್ ಸೀತಾರಿ ಜೊತೆ ಸೇರಿ ಅಕ್ಟೋಬರ್ 30 ರಂದು ರಾತ್ರಿ ಸುಮಾರು 11 ಗಂಟೆಗೆ ಬಲವಂತದಿಂದ ಹುಡುಗಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ನಂತರ ಸಂತ್ರಸ್ತೆಯನ್ನು ಬೆಟ್ಟದ ಬಳಿ ಕೂಡಿ ಹಾಕಿ ಮೂವರು ಸಾಮುಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಿದ್ದನ್ನು ಕಂಡು ಆ ಸ್ಥಳದಲ್ಲಿಂದ ಮೂವರು ಪರಾರಿಯಾಗಿದ್ದಾರೆ. ಬಳಿಕ ಸಂತ್ರಸ್ತೆ ಹೇಗೋ ತಪ್ಪಿಸಿಕೊಂಡು ಮನೆಗೆ ಹೋಗಿ ನಡೆದ ಘಟನೆಯ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ. ಬಳಿಕ ಪೋಷಕರು ಪಲ್ಲಹರಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಂಡು ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಕಾಲಿಯಾನನ್ನು ಬಂಧಿಸಿದ್ದು, ಆರೋಪಿ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv