ಹೈದರಾಬಾದ್: ಪ್ರೇಮಿಗಳಿಬ್ಬರು ಯುವತಿಯ ಪೋಷಕರಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಅಪಘಾತವಾಗಿರುವ ಘಟನೆ ಕಮ್ಮಮ್ ಜಿಲ್ಲೆಯ ಗೋಪಾಲಪುರಂನಲ್ಲಿ ನಡೆದಿದೆ.
ಸುಮಾ ಹಾಗೂ ತರುಣ್ ಇಬ್ಬರು ಪ್ರೀತಿಸುತ್ತಿದ್ದು, ಇವರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರು ಶನಿವಾರ ಬೆಳಗ್ಗೆ ಭದ್ರಚಲಂಗೆ ಹೋಗಿ ಮದುವೆ ಆಗಿದ್ದರು. ಭದ್ರಚಲಂನಲ್ಲಿ ಮದುವೆಯಾಗಿ ಹಿಂತಿರುಗುತ್ತಿದ್ದಾಗ ಯುವತಿಯ ಸಂಬಂಧಿಕರು ಅವರನ್ನು ಸಿನಿಮಿಯ ರೀತಿಯಲ್ಲಿ ಚೇಸ್ ಮಾಡಿದ್ದರು.
ಈ ಸಂದರ್ಭದಲ್ಲಿ ಯುವತಿ ಸುಮಾ ಅವರ ಪೋಷಕರಿಂದ ತಪ್ಪಿಸಿಕೊಳ್ಳಲು, ಪ್ರೇಮಿಗಳು ಹಾಗೂ ಇನ್ನೂ ಇಬ್ಬರು ಇದ್ದ ಕಾರನ್ನು ವೇಗವಾಗಿ ಚಲಿಸಿದ್ದರು. ಅಂತೆಯೇ ಕಾರ್ ಗೋಪಾಲಪುರಂ ಬಳಿ ಬರುತ್ತಿದ್ದಾಗ ಕಲ್ವರ್ಟ್ ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ.
ಕಾರು ಡಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಘಟನೆಯಲ್ಲಿ ಪ್ರೇಮಿಗಳು ಹಾಗೂ ಮತ್ತೊಬ್ಬ ಸ್ನೇಹಿತ ಗಾಯಗೊಂಡಿದ್ದು, ಕೂಡಲೇ ಅವರನ್ನು ಕಮ್ಮಮ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ತರುಣ್ ನ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ವರದಿಯಾಗಿದೆ.