ಮಂಡ್ಯ: ಲವ್ ಸ್ಟೋರಿಗೆ ಅಪ್ರಾಪ್ತೆ ಸೇರಿ ಮೂವರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಾಂಚನ(17) ಮೃತಪಟ್ಟ ಬಾಲಕಿ. ಮಂಚೇನಹಳ್ಳಿನವಳಾಗಿರುವ ಕಾಂಚನ, ಹೊನ್ನೇನಹಳ್ಳಿಯ ಯಶ್ವಂತ್(22)ನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿ ವಿಷಯ ಕಾಂಚನ ಮನೆಯವರಿಗೆ ತಿಳಿದಿದೆ. ಇದರಿಂದ ಭಯಗೊಂಡ ಕಾಂಚನ ಮೊದಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಹೊಟ್ಟೆ ನೋವು ತಾಳಲಾರದೇ ಅ.5ರಂದು ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.
ಮಗಳು ಆತ್ಮಹತ್ಯೆಗೆ ಯತ್ನಿಸಿರುವುದನ್ನು ನೋಡಿದ ಪೋಷಕರು ಆಕೆಯನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಕಾಂಚನ ಅಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಹಾಗಾಗಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ವೈದ್ಯರ ಸಲಹೆಯಂತೆ ಪೋಷಕರು ಕಾಂಚನಳನ್ನು ಬೆಂಗಳೂರಿನ ಬಿಜಿಎಸ್ ಆಸ್ಪತೆಗೆ ದಾಖಲಿಸಿದ್ದರು.
ಕಾಂಚನ ಆತ್ಮಹತ್ಯೆ ಯತ್ನಿಸಿದ ವಿಷಯ ತಿಳಿದ ಅಜ್ಜ ಚಂದ್ರಣ್ಣ ಆಕೆಯನ್ನು ನೋಡಲು ಉಟಿಯಿಂದ ಬಂದಿದ್ದರು. ಈ ವೇಳೆ ಮೊಮ್ಮಗಳ ಸ್ಥಿತಿಯನ್ನು ಕಂಡ ಚಂದ್ರಣ್ಣನಿಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕಾಂಚನ ಕೂಡ ಕೊನೆಯುಸಿರಿಳೆದಿದ್ದಾಳೆ. ಇದನ್ನೆಲ್ಲಾ ನೋಡಿ ಬಾಲಕಿಯ ಪೋಷಕರು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಯಶ್ವಂತ್ನನ್ನು ಬಂಧಿಸಿದ್ದಾರೆ.
ಈ ನಡುವೆ ಮಾನಕ್ಕೆ ಅಂಜಿ ಯಶ್ವಂತ್ ತಂದೆ ಸೋಮಶೇಖರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಮಗನ ತಪ್ಪಿನಿಂದಾಗಿ ಬಾಲಕಿ ಮೃತಪಟ್ಟ ವಿಷಯ ಹಾಗೂ ಪೊಲೀಸರು ಮಗನನ್ನು ಬಂಧಿಸಿದ ವಿಷಯಕ್ಕೆ ಮನನೊಂದ ಸೋಮಶೇಖರ್ ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರಿನಲ್ಲಿ ಸೋಮಶೇಖರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಈ ಎರಡು ವಿಷಯ ಕೇಳಿದ ತಕ್ಷಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.