ಮೈಸೂರು: ಯುವ ದಸರಾ ವೇದಿಕೆಯಲ್ಲೇ ಗಾಯಕ ಚಂದನ್ ಶೆಟ್ಟಿ-ನಿವೇದಿತಾಗೌಡ ಎಂಗೇಜ್ ಆಗಿದ್ದಾರೆ. ಝಗಮಗಿಸುವ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಬೆರಳಿಗೆ ಉಂಗುರ ತೊಡಿಸಿ ನಿನ್ನನ್ನೇ ಮದುವೆಯಾಗುತ್ತೇನೆಂದು ಘೋಷಿಸಿದ್ದಾರೆ. ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರೇಮ ನಿವೇದನೆ ಮಾಡಿದ್ದು ಯುವಜನತೆ ಬಿಗ್ಬಾಸ್ ಜೋಡಿಗೆ ಜೈಹಾರ ಹಾಕಿದರು.
ಪ್ರಪೋಸ್ ಗೂ ಮುನ್ನ ಚಂದನ್ಶೆಟ್ಟಿ ಬಿಗ್ಬಾಸ್ ಮನೆಯಲ್ಲಿ ನಿವೇದಿತಾ ಗೌಡ ಅವರಿಗೆ ಬರೆದಿದ್ದ ‘ಗೊಂಬೆ ಗೊಂಬೆ’ ಎಂಬ ಸಾಂಗ್ ಹಾಡಿದರು. ಇದಕ್ಕೆ ವೇದಿಕೆಯ ಮೇಲೆ ನಿವೇದಿತಾಗೌಡ ಅವರು ಸಹ ಸ್ಟೇಪ್ ಹಾಕಿದರು.
ಪ್ರಪೋಸ್ ಗೆ ಮುನ್ನ ವೇದಿಕೆಯಲ್ಲಿ ಮಾತನಾಡಿದ್ದ ಚಂದನ್, ಇಂದು ನಿಮ್ಮ ಮುಂದೆ ಹೇಳುತ್ತಿರುವ ಮಾತುಗಳನ್ನು ನಿವೇದಿತಾಗೆ ವಿದೇಶದ ಸುಂದರ ತಾಣದಲ್ಲಿ ಹೇಳಲು ಪ್ಲಾನ್ ಮಾಡಿಕೊಂಡಿದ್ದೆ. ಇಂದು ಬೆಳಗ್ಗೆ ಇಷ್ಟು ದೊಡ್ಡ ವೇದಿಕೆಯಲ್ಲಿ, ನನ್ನನ್ನು ಇಷ್ಟಪಡುವ ಜನರ ಮುಂದೆ ಹೇಳೋದು ಉತ್ತಮ. ಕಾರ್ಯಕ್ರಮಕ್ಕೆ ನನ್ನ ಪೋಷಕರು, ನಿವೇದಿತಾ ತಂದೆ-ತಾಯಿ ಸಹ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಾನು ಮತ್ತು ನಿವೇದಿತಾ ಬರೋಬ್ಬರಿ 105 ದಿನಗಳನ್ನು ಜೊತೆಯಾಗಿ ಕಳೆದಿದ್ದೇವೆ ಎಂದರು.
105 ದಿನಗಳಲ್ಲಿ ನಮ್ಮಿಬ್ಬರ ಸಾಕಷ್ಟು ಮಾತುಕತೆ ನಡೆದಿದೆ. 105 ದಿನಗಳಲ್ಲಿ ನಿವೇದಿತಾ ನನ್ನನ್ನು ಅರ್ಥ ಮಾಡಿಕೊಂಡಷ್ಟು ಯಾರು ಮಾಡಿಕೊಳ್ಳಲಿಲ್ಲ. ಹಾಗಾಗಿ ನನ್ನ ಜೀವನದಲ್ಲಿ ನಿವೇದಿತಾ ಮುಂದಿನ ದಿನಗಳಲ್ಲಿ ಜೊತೆಯಾಗಿರಲಿ ಎಂದು ಇಂದು ನಿಮ್ಮೆಲ್ಲರ ಸಾಕ್ಷಿಯಾಗಿ ಪ್ರೇಮ ನಿವೇದನೆಯನ್ನ ಸಲ್ಲಿಸುತ್ತಿದ್ದೇನೆ ಎಂದು ಮೊಳಕಾಲೂರಿ ಉಂಗುರ ಹಿಡಿದು ವಿಲ್ ಯು ಮ್ಯಾರಿ ಮೀ ಎಂದು ಚಂದನ್ ಪ್ರಪೋಸ್ ಮಾಡಿದರು.