– ಅಂದು ಕೊಲೆಗಾರ, ಇಂದು ಜೀವ ಉಳಿಸೋ ಡಾಕ್ಟರ್
ಕಲಬುರಗಿ: ತಪ್ಪು ಮಾಡಿ ಜೈಲುಪಾಲಾದರೆ ಅಂಥವರ ಬದುಕು ನಾಯಿ ಪಾಡಾಗುತ್ತದೆ. ಆದರೆ ಕಲಬುರಗಿ ಯುವಕ ಗೃಹಿಣಿಯ ಪ್ರೀತಿಯ ಬಲೆಯಲ್ಲಿ ಬಿದ್ದು, ಇಬ್ಬರು ಸೇರಿ ಗಂಡನನ್ನೇ ಗುಂಡಿಕ್ಕಿ ಕೊಲೆ ಮಾಡಿ 14 ವರ್ಷ ಜೈಲು ಪಾಲಾಗಿದ್ದರು. ನಂತರ 2016ರಲ್ಲಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಇಬ್ಬರನ್ನೂ ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ಅದೇ ವ್ಯಕ್ತಿ ಎಂಬಿಬಿಎಸ್ ಮುಗಿಸಿ ವೈದ್ಯನಾಗಿದ್ದಾನೆ. ವಿಶೇಷ ಅಂದರೆ ತಾನು ಪ್ರೀತಿಸಿದ ಗೃಹಿಣಿಯ ಕೈ ಹಿಡಿದು ಜೀವನ ನಡೆಸುತ್ತಿದ್ದಾನೆ.
ಸುಭಾಷ್ ಪಾಟೀಲ್ ಎಂಬಿಬಿಎಸ್ ಮುಗಿಸಿ ವೈದ್ಯನಾಗಿದ್ದಾನೆ. ಡಾಕ್ಟರ್ ಆಗಬೇಕು ಅಂತ ಕನಸು ಕಟ್ಟಿಕೊಂಡು ಕಲಬುರಗಿಯಿಂದ ಬೆಂಗಳೂರಿಗೆ ತೆರಳಿ ಎರಡು ವರ್ಷಗಳ ಕಾಲ ಎಂಬಿಬಿಎಸ್ ಮಾಡಿದ್ದನು. ಆದರೆ ಪರ ಪರುಷನ ಪತ್ನಿಯೊಂದಿಗೆ ಪ್ರೇಮಾಂಕುರವಾಗಿ, ಬಳಿಕ ಆಕೆಯ ಪತಿಯನ್ನು ಕೊಲೆ ಮಾಡಿ ಸುಭಾಷ್ ಜೈಲು ಪಾಲಾಗಿದ್ದನು. ಕೊಲೆ ಕೇಸಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಆಗಿತ್ತು. ತನ್ನ ಭವಿಷ್ಯ ಮುಗಿದು ಹೋಯಿತು ಅನ್ನುವಷ್ಟರಲ್ಲಿ ಮತ್ತೆ ಫಿನಿಕ್ಸ್ ನಂತೆ ಮೇಲೆದ್ದು ಬಂದು ತಾನಂದುಕೊಂಡಂತೆ ಡಾಕ್ಟರ್ ಆಗಿದ್ದಾನೆ.
ನಡೆದಿದ್ದೇನು?
ಜಿಲ್ಲೆಯ ಅಫಜಲಪುರ ತಾಲೂಕಿನ ನಿವಾಸಿಯಾದ ಸುಭಷ್ ಪಾಟೀಲ್ ಎಂಬಿಬಿಎಸ್ ಮಾಡೋದಕ್ಕೆ ಅಂತ 2002ರಲ್ಲಿ ಬೆಂಗಳೂರಿಗೆ ತೆರಳಿದ್ದ. ಆಗ ಕಲಬುರಗಿಯ ಉದ್ಯಮಿ ಅಶೋಕ್ ಗುತ್ತೆದಾರ್ ಪತ್ನಿ ಪದ್ಮಾವತಿಯ ಪ್ರೀತಿಯಲ್ಲಿ ಬಿದ್ದು, ಆಕೆಯ ಗಂಡನ ಕೊಲೆ ಮಾಡಿದ್ದರು. ಸುಭಾಷ್ ಪಾಟೀಲ್ ಮತ್ತು ಪದ್ಮಾವತಿ ಇಬ್ಬರು ಕೂಡ 14 ವರ್ಷಗಳ ಕಾಲ ಜೈಲು ಅನುಭಸಿ ಸನ್ನಡತೆ ಆಧಾರದ ಮೇಲೆ 2016ರ ಆಗಸ್ಟ್ 16ರಂದು ಕಲಬುರಗಿ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಹೊರಬಂದ ಪಾಟೀಲ್ ತಾನು ಪ್ರೀತಿಸಿದ ಪದ್ಮಾವತಿಯ ಕೈ ಹಿಡಿದು ನಂತರ ಅರ್ಧಕ್ಕೆ ಮೊಟಕುಗೊಳಿಸಿದ ಎಂಬಿಬಿಎಸ್ ಪದವಿಯನ್ನು ಮುಗಿಸಿ ಇದೀಗ ವೈದ್ಯನಾಗಿದ್ದಾನೆ. ಶನಿವಾರ ಕಲಬುರಗಿ ಎಂಆರ್ ಎಂಸಿ ಮೇಡಿಕಲ್ ಕಾಲೇಜಿನಲ್ಲಿ ತನ್ನ ಎಂಬಿಬಿಎಸ್ ಪದವಿಯನ್ನು ಸುಭಾಷ್ ಪಡೆದಿದ್ದಾನೆ.
ಸುಭಾಷ್ ಪಾಟೀಲ್ ಮತ್ತು ಆಕೆಯ ಪತ್ನಿ ಪದ್ಮಾವತಿ ಇಬ್ಬರು ಕೂಡ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಏಳು ವರ್ಷಗಳ ಕಾಲ ಕಳೆದು ಬಳಿಕ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಏಳು ವರ್ಷ ಸೇರೆವಾಸ ಅನುಭವಿಸಿದ್ದರು.
ಜೈಲಿನಲ್ಲಿದ್ದಾಗ ತಾವು ಮಾಡಿರುವ ತಪ್ಪಿಗೆ ನೊಂದಿದ್ದೇವೆ. ಜೈಲಿನಲ್ಲಿ ಹೊಸ ಪಾಠವನ್ನ ಕಲಿತು ತಮ್ಮ ಕೋಪ-ತಾಪವನ್ನ ಕಂಟ್ರೋಲ್ ಮಾಡಿಕೊಂಡು ಜೈಲಿನಿಂದ ಹೊರ ಬಂದಿದ್ದೇವೆ. ಬದಲಾವಣೆ ಆಗಬೇಕು ಅಂತ ಛಲದಿಂದ ಜೈಲಿನಲ್ಲಿ ಇಬ್ಬರು ಕೂಡ ಮುಕ್ತ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿಯನ್ನ ಮುಗಿಸಿದ್ದೇವೆ. ಕೊನೆಗೆ ಸನ್ನಡೆತೆಯನ್ನ ಕಂಡು 2016ರಲ್ಲಿ ಜೈಲಿನಿಂದ ಹೊರ ಬಂದಿದ್ದೇವೆ. ಜೈಲಿನಿಂದ ಹೊರ ಬಂದ ಬಳಿಕ ಸುಭಾಷ್ರ ಎಂಬಿಬಿಎಸ್ ಶಿಕ್ಷಣಕ್ಕೆ ಬೆಂಬಲ ನೀಡಿದ್ದೆ ಎಂದು ಪತ್ನಿ ಪದ್ಮಾವತಿ ಹೇಳಿದ್ದಾರೆ.
14 ವರ್ಷ ಸೆರೆವಾಸ ಅನುಭವಿಸಿ ಹೊರಬಂದ ಇಬ್ಬರೂ ತಮ್ಮದೇ ಪ್ರಪಂಚದಲ್ಲಿ ಚೆನ್ನಾಗಿದ್ದಾರೆ. ಜೈಲಿನಲ್ಲಿ ಆದಂತಹ ಕೆಲ ಅನುಭವಗಳ ಮೇಲೆ ಪದ್ಮಾವತಿ ಕಥೆಗಳನ್ನ ಬರೆಯೋಕೆ ಮುಂದಾಗಿದ್ದಾಳೆ. ಇತ್ತ ಸುಭಾಷ್ ಪಾಟೀಲ್ ವೈದ್ಯಕೀಯ ವೃತ್ತಿಗೆ ಸೇರಿಕೊಂಡು ನೊಂದವರ ಬಾಳಿಗೆ ಬೆಳಕಾಗುವ ಕನಸು ಕಾಣೋಕೆ ಮುಂದಾಗಿದ್ದಾರೆ. ಅಲ್ಲದೆ ಪೊಲೀಸರು ಮತ್ತು ನಿರ್ಗತಿಕರನ್ನ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಅವರಿಗೆ ಸಹಾಯವಾಗುವ ಮನೋಭಾವದಿಂದ ವೃತ್ತಿಯಲ್ಲಿ ಮುಂದುವರಿಯುವ ಆಸೆ ವ್ಯಕ್ತಪಡಿಸಿದ್ದಾರೆ.