-28ರ ಮಹಿಳೆ ಸಾವು, 19ರ ವಿದ್ಯಾರ್ಥಿ ಗಂಭೀರ
ಹೈದರಾಬಾದ್: ಮನೆಯಲ್ಲಿ ಮದುವೆಗೆ ಒಪ್ಪದ್ದಕ್ಕೆ ಪ್ರೇಮಿಗಳಿಬ್ಬರು ಲಾಡ್ಜಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೆಳತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಗೌತಮಿ(28) ಮೃತ ಪ್ರಾಧ್ಯಾಪಕಿ. ಈಕೆ ವಿದ್ಯಾರ್ಥಿಯಾಗಿದ್ದ ಲೋಕೇಶ್ (19) ನನ್ನು ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಮನೆಯವರು ಒಪ್ಪಿಲ್ಲವೆಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಏನಿದು ಪ್ರಕರಣ?
ಮೃತ ಗೌತಮಿ ಗನ್ನವರಂ ಮಂಡಲ ತೆಂಪಲ್ಲಿ ನಿವಾಸಿಯಾಗಿದ್ದು, ಈಕೆ ಉಷಾರಾಮ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಲೋಕೇಶ್ ಅದೇ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದನು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಇಷ್ಟಪಟ್ಟಿದ್ದರು. ನಂತರ ತಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆದರೆ ಇಬ್ಬರ ಮಧ್ಯೆ ವಯಸ್ಸಿನ ಅಂತರ ಇದ್ದುದ್ದರಿಂದ ಎರಡೂ ಕುಟುಂಬದವರು ಇವರ ಮದುವೆಗೆ ಒಪ್ಪಲಿಲ್ಲ.
ಇದರಿಂದ ನೊಂದ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ನಂತರ ವಿಜಯವಾಡದ ಗಾಂಧಿನಗರದ ಜಗಪತಿ ಲಾಡ್ಜ್ಗೆ ಹೋಗಿ ರೂಮ್ ಬುಕ್ ಮಾಡಿದ್ದಾರೆ. ಹಬ್ಬಕ್ಕೆ ಶಾಪಿಂಗ್ ಮಾಡಲು ಆಗಮಿಸಿದ್ದಾಗಿ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದರು. ರೂಮಿಗೆ ತೆರಳಿದ್ದ ಇಬ್ಬರು ಜ್ಯೂಸಿನಲ್ಲಿ ಕೀಟನಾಶಕ ಔಷಧಿಯನ್ನು ಬೆರೆಸಿಕೊಂಡು ಕುಡಿದಿದ್ದಾರೆ.
ರಾತ್ರಿಯಾದರೂ ರೂಮಿನಿಂದ ಇಬ್ಬರು ಹೊರ ಬರದಿದ್ದಕ್ಕೆ ಹೋಟೆಲ್ನ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಆಗ ಇಬ್ಬರು ವಿಷ ಸೇವಿಸಿರುವುದು ಕಂಡು ಬಂದಿದೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗೌತಮಿ ಅಷ್ಟರಲ್ಲಿಯೇ ಮೃತಪಟ್ಟಿದ್ದರು. ಇನ್ನೂ ಲೋಕೇಶ್ ಸಾವಿನಿಂದ ಪಾರಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಪ್ರಕರಣದ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತ ಗೌತಮಿಗೆ ಈಗಾಗಲೇ ಮನೆಯಲ್ಲಿ ಬೇರೆ ಹುಡುಗನ ಜೊತೆಗೆ ನಿಶ್ಚಿತಾರ್ಥ ಆಗಿತ್ತು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು. ಅಷ್ಟರಲ್ಲಿಯೇ ಮನೆಯಲ್ಲಿ ಪ್ರೀತಿಸಿದ ಹುಡುಗನ ಜೊತೆ ಮದುವೆಗೆ ಒಪ್ಪದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.