– ಮಾತ್ರೆ ನುಂಗಿ ಸ್ನೇಹಿತರಿಗೆ ಫೋನ್ ಮಾಡಿದ್ದ
– ಪಕ್ಕದ ಗ್ರಾಮದ ಯುವತಿಯನ್ನ ಪ್ರೀತಿಸಿದ್ದಕ್ಕೆ ದುರಂತ ಅಂತ್ಯ
ಚಿಕ್ಕಬಳ್ಳಾಪುರ: ಪ್ರೀತಿ ಮಾಡಿದ ತಪ್ಪಿಗೆ ಯುವತಿ ಮನೆಯ ಕಡೆಯವರು ಸಿನಿಮಾ ಸ್ಟೈಲಲ್ಲಿ ಯುವಕನನ್ನು ಕಿಡ್ನಾಪ್ ಮಾಡಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕು ಅರಿಕೆರೆ ಗ್ರಾಮದ ಗಜೇಂದ್ರ ಆತ್ಮಹತ್ಯೆಗೆ ಶರಣಾದ ಪ್ರೇಮಿ. ಪ್ರಿಯತಮೆ ಮನೆಯವರು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಕ್ಕೆ ಮನನೊಂದು ವಿಷದ ಮಾತ್ರೆಯನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಏನಿದು ಪ್ರಕರಣ?
ಗಜೇಂದ್ರ ಮತ್ತು ಹೊಸಹಳ್ಳಿ ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಸ್ವಜಾತಿಯವರಾದ ಕಾರಣ ಮದುವೆಗೆ ತೊಂದರೆಯಿಲ್ಲ ಎಂದು ಸುತ್ತಾಡುತ್ತಾ ದಿನ ಕಳೆಯುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಯ ವಿಷಯ ಯುವತಿಯ ತಾಯಿಗೆ ಗೊತ್ತಾಗಿದೆ. ನಂತರ ಯುವತಿ ತಾಯಿ ತನ್ನ ತಮ್ಮಂದಿರಿಗೆ ಯುವಕನಿಗೆ ಬುದ್ಧಿ ಕಲಿಸುವಂತೆ ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಯುವತಿಯ ಮಾವ, ಯುವಕರ ಗುಂಪು ಕಟ್ಟಿಕೊಂಡು ಅರಿಕೆರೆಗೆ ಹೋಗಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕಾರಿನಲ್ಲಿ ನೇರವಾಗಿ ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿ ಟ್ಯಾಂಕರ್ ಟ್ರ್ಯಾಕ್ಟರ್ ಓಡಿಸುತ್ತಿದ್ದ ಗಜೇಂದ್ರನನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿಂದಲೇ ಕಾರಿನಲ್ಲಿ ಗಜೇಂದ್ರನನ್ನು ಕಿಡ್ನಾಪ್ ಮಾಡಿದ್ದಾರೆ. ವಿಷಯ ತಿಳಿದು ಬಂದ ಯುವಕನ ತಂದೆ ವೆಂಕಟೇಶ್ ಅವರನ್ನು ಸಹ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ.
ನಾವು ಪೊಲೀಸರು ಬನ್ನಿ, ನಿಮ್ಮ ಮಗ ತಪ್ಪು ಮಾಡಿದ್ದಾನೆ ಪೊಲೀಸ್ ಸ್ಟೇಷನ್ಗೆ ಹೋಗೋಣ ಎಂದು ಹೇಳಿ ಹೊಸೂರು ಗ್ರಾಮದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ 10-12 ಮಂದಿಯ ಗುಂಪು ಗಜೇಂದ್ರನ ಕಾಲು ಕಟ್ಟಿ ಹಾಕಿ, ಸಿನಿಮಾ ಸ್ಟೈಲಲ್ಲಿ ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ ಮತ್ತೆ ಗಜೇಂದ್ರ ಹಾಗೂ ಆತನ ತಂದೆಯನ್ನ ಅರಿಕೆರೆ ಗ್ರಾಮಕ್ಕೆ ಕರೆ ತಂದು ಊರಿನ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯತಿ ಮಾಡಿದ್ದಾರೆ. ಅಲ್ಲಿಯೂ ಸಹ ಯುವತಿ ತಾಯಿ ಗಜೇಂದ್ರನಿಗೆ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದರಿಂದ ನೊಂದ ಗಜೇಂದ್ರ ಗ್ರಾಮ ಹೊರವಲಯದ ಕೆರೆ ಬಳಿ ಹೋಗಿ ವಿಷದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೇ ವೇಳೆ ತನ್ನ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಗಜೇಂದ್ರನನ್ನ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಜೇಂದ್ರ ಸಾವನ್ನಪ್ಪಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಗಜೇಂದ್ರನ ಸಾವಿನ ಸುದ್ದಿ ತಿಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ.